ರಾಮನಗರ: ರಾಮದೇವರ ಬೆಟ್ಟಕ್ಕೆ ಪ್ರವಾಸಕ್ಕೆಂದು ಬೆಂಗಳೂರಿನ ಶೇಷಾದ್ರಿಪುರದಿಂದ ಶುಕ್ರವಾರ ಆಗಮಿಸಿದ್ದ ವಿದ್ಯಾರ್ಥಿಗಳ ತಂಡ ಹೆಜ್ಜೇನಿನ ದಾಳಿಗೆ ಒಳಗಾಗಿದೆ. ಈ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಮತ್ತು ಒಬ್ಬ ಗೈಡ್ ಅಸ್ವಸ್ಥಗೊಂಡಿದ್ದರು.ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿದ ಸಂತಸದಲ್ಲಿದ್ದ ಶೇಷಾದ್ರಿಪುರ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯ 40 ವಿದ್ಯಾರ್ಥಿಗಳು ಸಂವಾದ ಸಂಸ್ಥೆಯ ನೇತೃತ್ವದಲ್ಲಿ ರಾಮದೇವರ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದರು.
ಬೆಟ್ಟ ಹತ್ತುವ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಹೆಜ್ಜೇನು 25ಕ್ಕೂ ವಿದ್ಯಾರ್ಥಿಗಳನ್ನು ಕಚ್ಚಿದೆ. ಅವರನ್ನು ರಕ್ಷಿಸಲು ಬಂದ ಶಿಕ್ಷಕರು ಮತ್ತು ಗೈಡನ್ನು ಕೂಡ ಹೆಜ್ಜೇನು ಬಿಟ್ಟಿಲ್ಲ. ಹೆಜ್ಜೇನಿನ ಕಡಿತದಿಂದ ತೀವ್ರ ಅಸ್ವಸ್ಥರಾದ ಮೀನಾಕ್ಷಿ, ಪ್ರೀತಿ, ನರೇಶಾ ವಿದ್ಯಾನಿಯರು, ಶಿಕ್ಷಕರಾದ ಜ್ಯೋತಿ, ದೇವರಾಜ್ ಹಾಗೂ ಗೈಡ್ ನಾಗರಾಜು ಅವರನ್ನು ಸ್ಥಳೀಯರ ನೆರವಿನಿಂದ ರಾಮನಗರದ ಬಿಜಿಎಸ್ ರೋಟರಿ ಆಸ್ಪತ್ರೆಗೆ ದಾಖಲಿಸಿದರು.
ಅಸ್ವಸ್ಥಗೊಂಡಿರುವ ಕೆಲವು ವಿದ್ಯಾರ್ಥಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಮೂವರು ವಿದ್ಯಾರ್ಥಿನಿಯರನ್ನು ತೀವ್ರ ನಿಗಾ ಘಟಕದಲ್ಲಿಡಲಾಗಿದೆ ಎಂದು ಸಂವಾದ ಸಂಸ್ಥೆಯ ಪ್ರತಿನಿಧಿ ಶಿವಪ್ರಸನ್ನ, ಮಂಜುನಾಥ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.