ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಲೆನಿನ್ ಕುರುಪ್ಪನ್ ವಿರುದ್ಧ ಸ್ವಾಮಿ ಹಾಗೂ ಅವರ ಭಕ್ತರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಲೆನಿನ್ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಅಡ್ಡಿ ಮಾಡಿದ ಕಾರಣ, ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿ ರುವ ಪ್ರಥಮ ಮಾಹಿತಿ ವರದಿ ರದ್ದತಿಗೆ ಒಟ್ಟು ಏಳು ಮಂದಿ ಕೋರ್ಟ್ ಮೊರೆ ಹೋಗಿದ್ದಾರೆ.
ಸ್ವಾಮಿ ಹಾಗೂ ಅವರ ಭಕ್ತರಿಂದ ತಮಗೆ ಬೆದರಿಕೆ ಇರುವುದಕ್ಕೆ ಸಂಬಂಧಿಸಿದಂತೆ ಇದೇ 9ರಂದು ಪ್ರೆಸ್ಕ್ಲಬ್ನಲ್ಲಿ ಲೆನಿನ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಆ ಸಂದರ್ಭದಲ್ಲಿ ಕ್ಲಬ್ನ ದ್ವಾರದ ಮುಂದೆ ಗಲಾಟೆ ಮಾಡಿರುವ ಆರೋಪಕ್ಕೆ ಇವರೆಲ್ಲ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲೆನಿನ್ ಎಲ್ಲರ ವಿರುದ್ಧ ದೂರು ದಾಖಲಿಸಿದ್ದಾರೆ.
‘ಲೆನಿನ್ ಅವರು ಒಂದಲ್ಲಾ ಒಂದು ನೆಪ ಒಡ್ಡಿ ಮೊದಲಿನಿಂದಲೂ ಇದೇ ರೀತಿ ದೂರು ದಾಖಲು ಮಾಡುತ್ತಲೇ ಬಂದಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ದಾಖಲಿಸಿರುವ ದೂರಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ’ ಎಂಬಿತ್ಯಾದಿಯಾಗಿ ಅರ್ಜಿಯಲ್ಲಿ ಪದ್ಮಿನಿ, ಪ್ರೀತಾ, ನಿತ್ಯಾನಂದ ಮುಂತಾದವರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.