ಹೊಸಕೋಟೆ: ಮನೆಯೊಂದರ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಸುಮಾರು ್ಙ3 ಲಕ್ಷ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಕಳವು ಮಾಡಿದ್ದಾರೆ.
ಪಟ್ಟಣದ ವಿನಾಯಕ ನಗರದ ಸಿಂಗ್ ಬಡಾವಣೆಯಲ್ಲಿನ ರಾಮಚಂದ್ರರಾವ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಈ ಕಳವು ನಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರಾಮಚಂದ್ರರಾವ್ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪತ್ನಿ ಹಾಗೂ ಮಕ್ಕಳು ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ರಾಮಚಂದ್ರರಾವ್ ಪುತ್ರಿ ಹೇಮಾವತಿ ಮನೆಗೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂತು.
ಕೊಲೆ ಆರೋಪಿಗಳ ಬಂಧನ
ಇಲ್ಲಿಗೆ ಸಮೀಪದ ಕಣ್ಣೂರಹಳ್ಳಿ ಗ್ರಾಮದಲ್ಲಿ ಮಾರ್ಚ್ 28 ರಂದು ನಡೆದ ವೃದ್ಧರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೃದ್ಧರ ಇಬ್ಬರು ಮೊಮ್ಮಕ್ಕಳನ್ನು ಬಂಧಿಸಿದ್ದಾರೆ.
ಕಣ್ಣೂರಹಳ್ಳಿ ಗ್ರಾಮದ ಕುಮಾರ ಅಂಬೇಡ್ಕರ್ (26) ಹಾಗೂ ದೊಮ್ಮಸಂದ್ರದ ನಾಗರಾಜ್ (26) ಬಂಧಿತರು. ಕೊಲೆಯಾದ ಅಣ್ಣಯ್ಯಪ್ಪ (75) ಒಂಟಿಯಾಗಿ ವಾಸಿಸುತ್ತಿದ್ದು ಅವರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.
ಅವರು ಆಸ್ತಿಯನ್ನು ಪುತ್ರಿಯೊಬ್ಬಳ ಮಗನಿಗೆ ಬರೆದು ಕೊಡಲು ಮುಂದಾಗಿದ್ದ ವಿಚಾರ ಆರೋಪಿಗಳಿಗೆ ಗೊತ್ತಾಯಿತು. ಆಸ್ತಿ ಕಬಳಿಸುವಲ್ಲಿ ಸಂಚು ರೂಪಿಸಿದ ಅವರು ಇನ್ನಿಬ್ಬರ ಜೊತೆ ಸೇರಿ ರಾಡಿನಿಂದ ತಲೆಗೆ ಹೊಡೆದು ತಾತನ ಕೊಲೆ ಮಾಡಿದ್ದರು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.