ADVERTISEMENT

‘ನೆಮ್ಮದಿ ನೀಡುವ ಕವಿತೆ ಬೇಕು’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:43 IST
Last Updated 2 ಮಾರ್ಚ್ 2014, 19:43 IST

ಬೆಂಗಳೂರು: ‘ಮನಸ್ಸು ಹಾಗೂ ಹೃದಯ­ವನ್ನು ಉಲ್ಲಾಸಗೊಳಿಸುವ, ನೆಮ್ಮದಿ ನೀಡುವ ಕವಿತೆಗಳ ರಚನೆ­ಯಾ­ಗಬೇಕಿದೆ’ ಎಂದು ಕವಿ ಡಾ.ಸಿದ್ದ­ಲಿಂಗಯ್ಯ ಹೇಳಿದರು.

ಅಂಕಿತ ಪುಸ್ತಕ ಪ್ರಕಾಶನವು ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 11 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನಸ್ಸನ್ನು ಉಲ್ಲಸಿತಗೊಳಿಸುವ ಕವಿತೆಗಳು ಇಂದು ಕ್ಷೀಣಿಸುತ್ತಿವೆ. ಕವಿತೆ­ಗಳನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯಬೇಕು.  ಆದರೆ, ಇಂತಹ ಕವಿತೆಗಳ ಕೊರತೆ ಕಾಣುತ್ತಿದೆ’ ಎಂದರು.

‘ಯುವಕರು ಉತ್ತಮ ಕವಿತೆಗಳನ್ನು ಬರೆದು, ಉತ್ತಮ ಕವಿಗಳಾಗಲು ಪ್ರಯತ್ನ ಪಡಬೇಕು. ಕವಿತೆಗಳಲ್ಲಿ ತಮ್ಮನ್ನು ತಾವು ಹೆಚ್ಚು ರೂಢಿಸಿ­ಕೊಳ್ಳಬೇಕು’ ಎಂದು ಹೇಳಿದರು.

ಲೇಖಕ ಜೋಗಿ ಮಾತನಾಡಿ, ‘ಇಂದು ಫೇಸ್‌ಬುಕ್‌ನಿಂದ ಸಾಕಷ್ಟು ಕವಿಗಳ ಸೃಷ್ಟಿಯಾಗುತ್ತಿದೆ. ಇದನ್ನು ಫೇಸ್‌­ಬುಕ್‌ ಮನ್ವಂತರ ಎಂದು ಕರೆಯ­ಬಹುದು. ಹಾಗಾಗಿ ಕವಿತೆ ಓದಲು ಅಥವಾ ಬರೆಯಲು ಪೇಪರ್‌, ಪುಸ್ತಕದ ಅಗತ್ಯವೇ ಇಲ್ಲವಾಗಿದೆ’ ಎಂದು ನುಡಿದರು.

ಬಿಡುಗಡೆಯಾದ ಪುಸ್ತಕಗಳು: ಚೇತನಾ ತೀರ್ಥಹಳ್ಳಿ– ‘ಶಬರಿಯ ಅವಸರ’ ಕವಿತೆಗಳು, ಹೃದಯಶಿವ –‘ಹರಿವ ತೊರೆ’ ಕಿರುಗವಿತೆ, ಲಾರಾ ಇಂಗಲ್ಸ್‌ ವೈಲ್ಡರ್‌– ‘ದೊಡ್ಡಕಾಡಿನಲ್ಲಿ ಪುಟ್ಟ­ಮನೆ’, ‘ಹುಲ್ಲುಗಾವಲಿನಲ್ಲಿ ಪುಟ್ಟ­ಮನೆ’, ‘ರೈತರ ಹುಡುಗ’, ‘ಪ್ಲಂ ನದಿಯ ತೀರದಲ್ಲಿ’, ‘ಚಳಿಯ ಸುಳಿಯಲ್ಲಿ’, ‘ಸಿಲ್ವರ್‌ ಲೇಕ್‌ ದಡದಲ್ಲಿ’, ‘ಹುಲ್ಲು­ಗಾವಲಿನಲ್ಲಿ ಪುಟ್ಟ ಪಟ್ಟಣ’, ‘ಆ ಸೊಗಸಿನ ಬಂಗಾರದ ದಿನಗಳು’ ಅನು­ವಾದ ಕೃತಿಗಳು (ಅನುವಾದ– ಎಸ್‌. ಅನಂತನಾರಾಯಣ) ಹಾಗೂ ‘ಮೊದಲ ನಾಲ್ಕು ವರ್ಷಗಳು’ (ಅನುವಾದ– ಕೆ.ಪಿ. ಈಶಾನ್ಯೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.