ಬೆಂಗಳೂರು: ‘ಲೋಕಪಾಲ ಕಾಯ್ದೆಯು ಭ್ರಷ್ಟ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ರಕ್ಷಿಸುವ ಕಾನೂನಾಗಿದೆ. ಇದರಿಂದ, ಜನಸಾಮಾನ್ಯರಿಗೆ ಮೂರು ಕಾಸಿನ ಪ್ರಯೋಜನವಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರು ಹೇಳಿದರು.
ಭ್ರಷ್ಟಾಚಾರ ನಿರ್ಮೂಲನ ವೇದಿಕೆಯು ನಗರದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ 8 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಲೋಕಪಾಲ ಕಾನೂನಿನಲ್ಲಿ ಯಾರು ದೂರು ನೀಡುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳಬಹುದು ಎಂಬ ಅಂಶವಿದೆ. ಇದರಿಂದ, ಭ್ರಷ್ಟ ಅಧಿಕಾರಿಗಳು ನನಗೆ ಕೆಲಸ ಮಾಡಲು ತೊಂದರೆ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಸಿ ಕ್ರಮ ಕೈಗೊಳ್ಳಬಹುದು. ಇದರಿಂದ, ಜನರು ಯಾವುದೇ ಅಧಿಕಾರಿಯ ವಿರುದ್ಧ ದೂರು ಸಲ್ಲಿಸಿದರೆ, ಅವರಿಗೇ ಕಂಟಕಪ್ರಾಯವಾಗುತ್ತದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಪಾಲ ಕಾಯ್ದೆ ಅನುಷ್ಠಾನಕ್ಕೆ ತಾತ್ಕಾಲಿಕ ತಡೆಯೊಡ್ಡಿದ್ದಾರೆ. ಮುಖ್ಯಮಂತ್ರಿ ಅವರು ಈ ಕಾನೂನಿನ ಕುರಿತು ಕೂಲಂಕಶವಾಗಿ ಪರಿಶೀಲಿಸಬೇಕು. ಈ ಕಾನೂನು ಜಾರಿಯಾದಲ್ಲಿ ಜನಸಾಮಾನ್ಯರ ಹಕ್ಕು ಕಿತ್ತುಕೊಂಡಂತಾಗುತ್ತದೆ. ಆದ್ದರಿಂದ, ಲೋಕಪಾಲ ಕಾನೂನು ಜಾರಿಗೆ ತರಬಾರದು’ ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ‘ರಾಜಕಾರಣವು ಇಂದು ಸೇವೆಯಾಗದೆ, ವ್ಯಾಪಾರವಾಗಿದೆ. ಪ್ರಜಾಪ್ರಭುತ್ವ ಸತ್ತ ಶವವಾಗಿದೆ. ಶವದ ಮುಂದೆ ಮಾಡುವ ಪ್ರತಿಭಟನೆ, ಹೋರಾಟ, ಗಂಟೆಯ ಸ್ವರ ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ವಿಷಾದಿಸಿದರು.
‘ಭ್ರಷ್ಟಾಚಾರ ನಿಯಂತ್ರಿಸಬೇಕಾದ ಸಾಂವಿಧಾನಿಕ ಸಂಸ್ಥೆಗಳೇ ಇಂದು ಭ್ರಷ್ಟಾಚಾರದಲ್ಲಿ ತೊಡಗಿವೆ. ನ್ಯಾಯಾಲಯಗಳ ಮೇಲೆ ಜನರಿಗೆ ಕೊನೆಯ ವಿಶ್ವಾಸವಿದೆ. ನ್ಯಾಯಾಲಯಗಳಾದರೂ ಜನರ ನಿರೀಕ್ಷೆಗಳಿಗೆ ತಕ್ಕಂತೆ ನ್ಯಾಯವನ್ನು ಸಲ್ಲಿಸಬೇಕಾಗಿದೆ’ ಎಂದು ಹೇಳಿದರು.
‘ಅತಿ ಹೆಚ್ಚಿನ ರೀತಿಯಲ್ಲಿ ಯುವಕರು ಭ್ರಷ್ಟಾಚಾರ ನಿರ್ಮೂಲನ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಸ್ವಾತಂತ್ರ್ಯದ ಚಳವಳಿಯಂತೆ ಭ್ರಷ್ಟಾಚಾರ ನಿರ್ಮೂಲನ ಚಳವಳಿ ನಡೆಯಬೇಕಾಗಿದೆ’ ಎಂದರು.
ಭ್ರಷ್ಟಾಚಾರ ನಿರ್ಮೂಲನ ವೇದಿಕೆ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ ಮಾತನಾಡಿ, ‘ಅಧಿಕಾರದ ಸೂತ್ರವನ್ನು ಹಿಡಿದವರಿಂದಲೇ ಇಂದು ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲ ಇಲಾಖೆಗಳಿಗೂ ಭ್ರಷ್ಟಾಚಾರ ವ್ಯಾಪಕವಾಗಿ ವ್ಯಾಪಿಸಿದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.