ADVERTISEMENT

‘ಸಮತೋಲನದ ಕೇಂದ್ರ ಬಜೆಟ್‌’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:58 IST
Last Updated 10 ಮಾರ್ಚ್ 2014, 19:58 IST

ಬೆಂಗಳೂರು: ‘ಈ ಬಾರಿಯ ಕೇಂದ್ರದ ಬಜೆಟ್‌ ಸಾಕಷ್ಟು ಬದಲಾವಣೆಗಳಿಲ್ಲದ ಮತ್ತು ಹೊಸ ಯೋಜನೆಗಳಿಲ್ಲದ ಸಮ­ತೋಲ­ನದ ಬಜೆಟ್‌ ಆಗಿದೆ’ ಎಂದು ನ್ಯಾಷನಲ್‌ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್‌.ಆರ್‌.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಬೆಂಗಳೂರು ಸಾಮಾಜಿಕ ವಿಜ್ಞಾನ ವೇದಿಕೆಯು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸೋಮವಾರ   ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೇಂದ್ರ ಬಜೆಟ್‌–2014’ ಕುರಿತು ಉಪನ್ಯಾಸ ನೀಡಿದರು.

‘ಚುನಾವಣೆಯ ದೃಷ್ಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ  ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಸಮತೋಲನವನ್ನು ಕಾಪಾಡಿ­ಕೊಂಡಿ­ದ್ದಾರೆ. ಮಧ್ಯಮವರ್ಗದವರನ್ನು ದೃಷ್ಟಿ­ಯ­ಲ್ಲಿ­ರಿಸಿ ನೀಡಿದ ಬಜೆಟ್‌ ಇದಾಗಿದೆ’ ಎಂದರು.

‘ನೇರ ತೆರಿಗೆಯ ಸಂಗ್ರಹದಲ್ಲಿ ಏನೂ ಬದಲಾವಣೆಯಿಲ್ಲ. ಆದರೆ, ಮನೆಯನ್ನು ಹೊಸದಾಗಿ ಖರೀದಿಸುವವರಿಗೆ ಮತ್ತು ಕಟ್ಟುವವರಿಗೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡಿಲ್ಲ. ನೌಕರರ ಭವಿಷ್ಯ ನಿಧಿಯ ಮೇಲೂ ತೆರಿಗೆಯನ್ನು ವಿಧಿಸಲಾಗಿದೆ’ ಎಂದರು.

‘ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಮನೆ ಬಳಕೆಯ ಸಾಮಾನುಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಿದ್ದಾರೆ. ಲ್ಯಾಪ್‌­ಟಾಪ್‌, ಬೈಕ್‌, ಕಾರು, ವಾಷಿಂಗ್‌ ಮೆಷಿನ್‌ ಇವುಗಳನ್ನು ಖರೀದಿಸುವವರು ಜೂನ್‌ ತಿಂಗಳ ಒಳಗೆ ಖರೀದಿಸ­ಬೇಕಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.