ADVERTISEMENT

‘ಸಮತೋಲನ ಪೋಷಕಾಂಶ ಬಳಸಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:41 IST
Last Updated 3 ಜನವರಿ 2014, 19:41 IST

ನೆಲಮಂಗಲ: ‘ಮಣ್ಣಿನ ಫಲವತ್ತತೆ ಮತ್ತು ಮಾದರಿಗಳನ್ನು ಪರೀಕ್ಷಿಸಿಕೊಳ್ಳುವ ಮೂಲಕ ಸಮತೋಲನ ಪೋಷಕಾಂಶ­ಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕು’ ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಡಾ.ನವೀನ್‌ ಸಲಹೆ ನೀಡಿದರು.

ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ರೈತ ದಿನಾಚರಣೆ ಮತ್ತು ಭೂ ಚೇತನ ಯೋಜನೆ ಅಡಿಯಲ್ಲಿ ಬೆಳೆದ ರಾಗಿ ಬೆಳೆಯ ತಾಲ್ಲೂಕು ಮಟ್ಟದ ಕ್ಷೇತ್ರೋತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಡಾ.ಉಮೇಶ್‌ ಚಂದ್ರ ಬ್ಯಾನರ್ಜಿ ಮಾತನಾಡಿ, ‘ಸುಧಾ­ರಿತ ನೂತನ ತಾಂತ್ರಿಕತೆಗಳನ್ನು ಬಳಸಿಕೊಂಡು ಕೃಷಿ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದರು.

ಮಹದೇವಪುರದ ರೈತ ಮಲ್ಲಿಕಾರ್ಜುನ ಸ್ವಾಮಿ ಬೆಳೆದ ಇಂಡಾಪ್‌ 7 ರಾಗಿಯನ್ನು ಪರೀಕ್ಷಿಸಿದ ಅಧಿಕಾರಿಗಳು ಅಭಿ­ನಂದಿಸಿದರು. ತಾಲ್ಲೂಕಿನ ಪ್ರಗತಿಪರ ರೈತರಾದ ಮಾಚೊ­ನಾಯಕನಹಳ್ಳಿ ಶ್ರೀಧರ್‌, ಮಹದೇವಪುರದ ಮಲ್ಲಿಕಾರ್ಜುನ ಸ್ವಾಮಿ, ಮೊದಲಕೋಟೆಯ ಹನುಮಂತರಾಯ ಅವರನ್ನು ಯಂಟಗಾನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್‌ ಸನ್ಮಾನಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಮಾಜದ ಅಧ್ಯಕ್ಷ ಸಿದ್ದಪ್ಪ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಹನುಮಂತ­ರಾಜು, ಡಾ.ಮಂಜಪ್ಪ, ಸುಶೀಲಾದೇವಿ, ಸಹಾಯಕ ನಿರ್ದೇಶಕ ಡಾ.ರಾಮಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.