ADVERTISEMENT

‘ಹಿಂದೆ ಹೆಣ್ಣಿಗೆ ಲೈಂಗಿಕ ಸ್ವಾತಂತ್ರ್ಯವಿತ್ತು’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:51 IST
Last Updated 16 ಮಾರ್ಚ್ 2014, 19:51 IST

ಬೆಂಗಳೂರು: ‘ನಾಲ್ಕೈದು ತಲೆಮಾರು­ಗಳ ಹಿಂದೆ ಹೆಣ್ಣಿಗೆ ಲೈಂಗಿಕ ಸ್ವಾತಂತ್ರ್ಯ­ವಿತ್ತು’ ಎಂದು ರಂಗಕರ್ಮಿ ಡಾ.ಲಕ್ಷ್ಮೀ ಚಂದ್ರಶೇಖರ್ ಹೇಳಿದರು.

ಸೃಷ್ಟಿ ಪ್ರಕಾಶನ ಮತ್ತು ಸಾಹಿತ್ಯ ಭಂಡಾರದ ವತಿಯಿಂದ  ಭಾನುವಾರ ಏರ್ಪ­ಡಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ನಾಗರಾಜ್ ನೀರಗುಂದ ಅವರ ‘ತಿರು­ಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ’ ನಾಟಕ ಮತ್ತು ಕಾದಂ­ಬರಿ­ಗಾರ್ತಿ ಡಾ.­ಅನಸೂಯಾ­ದೇವಿ ಅವರ ‘ಎದೆ ಹಾಸಿನ  ಭಾವ ಹೂಗಳು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಲೈಂಗಿಕ ಸ್ವಾತಂತ್ರ್ಯವನ್ನು ಆಕೆಯ ಕುಟುಂಬ ಸದಸ್ಯರಾಗಲೀ, ಪತಿ­ಯಾಗಲಿ ಕಸಿದುಕೊಳ್ಳುತ್ತಿರಲಿಲ್ಲ. ತಿರು­ಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ ನಾಟಕವು ಹೆಣ್ಣಿನ ಲೈಂಗಿಕತೆ­ಯನ್ನು ಸಮಾಜಶಾಸ್ತ್ರ ಮತ್ತು ಭೂ ವಿಜ್ಞಾನದ ನೆಲೆಯಲ್ಲಿ ವಿವರಿಸುತ್ತದೆ. ಅರ್ಥ, ಕೀರ್ತಿ, ಮೋಕ್ಷಗಳ  ಹುಡು­ಕಾಟ­ದಲ್ಲಿ ಗಂಡು ಹೆಣ್ಣನ್ನು ಮರೆ­ತಾಗ ಆಗುವ ಅನಾಹುತದ ಬಗ್ಗೆ ಚರ್ಚಿ­ಸುತ್ತದೆ’ ಎಂದರು.

ಕವಿ  ಡಾ.ಎನ್.ಎಸ್. ಲಕ್ಷ್ಮೀ­ನಾರಾ­ಯಣ ಭಟ್ಟ ಅವರು, ‘ಇದು ಕನ್ನಡ ಸಾಹಿತ್ಯದಲ್ಲೇ ಅಪರೂಪದ ಮತ್ತು ವಿಶಿಷ್ಟ­ವಾದ ನಾಟಕ. ವೈಜ್ಞಾನಿಕ ತಳ­ಹದಿಯ ಮೇಲೆ ರೂಪು­ಗೊಂಡಿ­ರುವ ಈ ಸಾಂಕೇತಿಕ  ನಾಟಕವು ಧರ್ಮ ಮತ್ತು ಮೋಕ್ಷಗಳಿಗೆ ಧಕ್ಕೆಯಾಗದಂತೆ ಅರ್ಥ ಮತ್ತು ಕಾಮವನ್ನು ಸಾಧಿಸುವ ಬಗ್ಗೆ  ಚರ್ಚಿಸುತ್ತದೆ’ ಎಂದರು.

ಸಾಹಿತಿ ಡಾ.ಸಿ.ವೀರಣ್ಣ ಅವರು ಮಾತ­ನಾಡಿ, ‘ಸಂಕೀರ್ಣವಾದ ಈಗಿನ ಬದುಕನ್ನು ಅರ್ಥ ಮಾಡಿಕೊಳ್ಳಲು ಲೇಖಕನ ಆಲೋಚನೆಗಳೂ ಸಂಕೀರ್ಣ­ವಾಗ­ಬೇಕು. ಇಲ್ಲದಿದ್ದಲ್ಲಿ ಸಂಘರ್ಷ­ಗಳ ನಡು­ವಿನ ದಾರಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ’ ಎಂದರು.ನಿಘಂಟು ತಜ್ಞ ಪ್ರೊ.ಜಿ. ವೆಂಕಟ­ಸುಬ್ಬಯ್ಯ ಅವರು ಮಾತನಾಡಿ, ‘ಹೆಣ್ಣಿನ ಹೃದಯದಲ್ಲಿ ಓಡಾಡುವ ಸಾವಿ­­­ರಾರು ಭಾವಗಳಿಗೆ ಅನಸೂಯಾ­ದೇವಿ ಅವರು ಕವನದ ರೂಪ ನೀಡಿದ್ದಾರೆ’ ಎಂದರು.ಕವಯಿತ್ರಿ ಪ್ರೊ.ಎಂ.ಆರ್.ಕಮಲ, ಪ್ರಕಾಶಕ ಸೃಷ್ಟಿನಾಗೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.