ಬೆಂಗಳೂರು:‘ಕಟ್ಟಡ ಅಥವಾ ಯಾವುದೇ ಇತರೆ ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ನಗರದ ವಿವಿಧೆಡೆ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳ ಬಳಿ ಇರುವ ಕಾರ್ಮಿಕರ ಸಂಕಷ್ಟಗಳನ್ನು ಖುದ್ದು ಆಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
‘ಆರೋಗ್ಯ ದೃಷ್ಠಿಯಿಂದ ಎಲ್ಲಾ ಕಾರ್ಮಿಕರಿಗೆ ಮುಖಗವಸು, ಸ್ಯಾನಿಟೈಸರ್ಒದಗಿಸಲಾಗುವುದು. ಕಾರ್ಮಿಕ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಪ್ರತಿ ದಿನ ಎರಡು ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಮಿಕರ ಯೋಗ ಕ್ಷೇಮ ವಿಚಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಸೂಚನೆ ನೀಡಿದರು.
ಲಾಕ್ಡೌನ್ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಇದೆ. ಇದರಿಂದಉಧ್ಭವಿಸುವ ಸಮಸ್ಯೆಗಳನ್ನು ಕಾರ್ಮಿಕರು ಸಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಮಿಕರಿಗೆ ಬೇಡದ ಮುಖಗವಸು ನಿಮಗೇಕೆ?: ಹೆಬ್ಬಾಳದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಭೇಟಿ ನೀಡಿದ ಸಚಿವರು,600 ಕಾರ್ಮಿಕರೊಂದಿಗೆ ಮಾತನಾಡಲು ಮುಂದಾದರು. ಅಲ್ಲಿನ ಯಾವುದೇ ಕಾರ್ಮಿಕರು ಮುಖಗವಸು (ಮಾಸ್ಕ್) ಧರಿಸಿರಲಿಲ್ಲ ಎಂಬುದನ್ನು ಗಮನಿಸಿದ ಸಚಿವರು ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಯನ್ನು ಕರೆಸಿದರು.
ಅವರು ಮುಖಗವಸು ತೊಟ್ಟು ಬಂದದ್ದನ್ನು ಕಂಡು ಕೆಂಡಾಮಂಡಲವಾದ ಸಚಿವರು, ’ನೀವ್ಯಾಕೆ ಮುಖಗವಸು ತೊಟ್ಟಿದ್ದೀರಿ? ಕಾರ್ಮಿಕರಿಗೆ ಬೇಡದ ಮುಖಗವಸು ನಿಮಗೇಕೆ? ನಿಮ್ಮ ಆರೋಗ್ಯದಷ್ಟೇ ಕಾರ್ಮಿಕರ ಆರೋಗ್ಯ ಮುಖ್ಯವಲ್ಲವೇ?’ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಈ ಸಂಬಂಧಗುತ್ತಿಗೆದಾರ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.