ADVERTISEMENT

Cubbon Park | ಬೇರೆ ಕಡೆಗೆ ಕಟ್ಟಡ ನಿರ್ಮಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 23:45 IST
Last Updated 13 ಫೆಬ್ರುವರಿ 2024, 23:45 IST
   

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಹತ್ತು ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪರಿಸರ ಪ್ರೇಮಿಗಳು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ಪರಿಣಾಮ ಲೋಕೋಪಯೋಗಿ ಇಲಾಖೆ ಬೇರೆ ಕಡೆಗೆ ಕಟ್ಟಡ ನಿರ್ಮಿಸಿಲು ನಿವೇಶನ ಹುಡುಕುತ್ತಿದೆ.

‘ಸಿಟಿ ಸಿವಿಲ್‌ ನ್ಯಾಯಾಲಯದ ಸಮೀಪದಲ್ಲಿರುವ ಸೆಂಟ್ರಲ್‌ ಕಾಲೇಜಿನ ಆವರಣದಲ್ಲಿರುವ ಖಾಲಿ ಜಾಗವು ಕಟ್ಟಡವನ್ನು ನಿರ್ಮಿಸಲು ಸೂಕ್ತವಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅನುಮೋದನೆ ನೀಡಿದರೆ ಕಟ್ಟಡವನ್ನು ಇಲ್ಲಿಯೇ ನಿರ್ಮಿಸಬಹುದು’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕಬ್ಬನ್‌ ಉದ್ಯಾನದಲ್ಲಿ ಅಗತ್ಯವಿದ್ದಾಗ ಕಟ್ಟಡಗಳನ್ನು ನಿರ್ಮಿಸಬಹುದು. ಆದರೆ, ಯಾವುದೇ ರೀತಿಯ ಮರಗಳನ್ನು ಕತ್ತರಿಸುವಂತಿಲ್ಲ ಎಂದು 2019ರಲ್ಲಿ ಹೈಕೋರ್ಟ್‌ ಆದೇಶ ನೀಡಿತ್ತು. ಆದ್ದರಿಂದ, ರಾಜ್ಯ ಸರ್ಕಾರ ಉದ್ಯಾನದಲ್ಲಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿತ್ತು.

ADVERTISEMENT

ನಗರದ ಪ್ರಮುಖ ಶ್ವಾಸಕೋಶವಾಗಿರುವ ಉದ್ಯಾನದಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ವಾಯುವಿಹಾರಿಗಳು, ಪರಿಸರವಾದಿಗಳು, ಸಂಘ–ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದರು. ತೋಟಗಾರಿಕೆ ಇಲಾಖೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಬಿಟ್ಟಿದೆ. ಬೇರೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.