ಬೆಂಗಳೂರು: ಕೊತ್ತನೂರು ಸಮೀಪದ ಹೆಗಡೆ ನಗರದಲ್ಲಿ ಗುರುವಾರ ರಾತ್ರಿ ಖಾಸಗಿ ಕಂಪನಿಯೊಂದರ ಲೆಕ್ಕ ಪರಿಶೋಧಕ ಕುಮಾರ ಭಾಗವತ್ (36), ಅಪಾರ್ಟ್ಮೆಂಟ್ ಸಮುಚ್ಚಯದ 11ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರಕನ್ನಡ ಜಿಲ್ಲೆ ಅಂಕೋಲದವರಾದ ಭಾಗವತ್, ಪತ್ನಿ ದರ್ಶ ಹಾಗೂ ಎರಡು ವರ್ಷದ ಮಗಳೊಂದಿಗೆ ಹೆಗಡೆ ನಗರದ ‘ವಜ್ರಂ’ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ನೆಲೆಸಿದ್ದರು. ರಾತ್ರಿ ಪತ್ನಿ, ಮಗು ಮಲಗಿದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 5 ಗಂಟೆಗೆ ಕಟ್ಟಡದ ನಿವಾಸಿಗಳು ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
‘ಸಂಜೆ ಶಾಪಿಂಗ್ಗೆ ಹೋಗಿದ್ದ ನಾವು, ರಾತ್ರಿ 11.30ರ ಸುಮಾರಿಗೆ ಫ್ಲ್ಯಾಟ್ಗೆ ವಾಪಸಾಗಿದ್ದೆವು. ಬಂದ ಕೂಡಲೇ ನಾನು ಹಾಗೂ ಮಗು ಕೋಣೆಯಲ್ಲಿ ಮಲಗಿದೆವು. ಪತಿ ಯಾವಾಗ ಹೊರಗೆ ಹೋದರು, ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ನನಗೆ ಗೊತ್ತಿಲ್ಲ’ ಎಂದು ದರ್ಶ ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದರು.
‘ಸೋದರ ಕುಮಾರಕೃಪಾ ರಸ್ತೆಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನ ದಾಂಪತ್ಯ ಜೀವನ ಅಷ್ಟು ಚೆನ್ನಾಗಿರಲಿಲ್ಲ. ಅದೇ ಬೇಸರದಲ್ಲಿ ಸಾಯುವ ನಿರ್ಧಾರ ತೆಗೆದುಕೊಂಡಿರಬಹುದು’ ಎಂದು ಮೃತರ ಅಕ್ಕಂದಿರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.