ADVERTISEMENT

11ರಿಂದ ವಿಜ್ಞಾನಮಯಿ ಪ್ರಸಾರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಶಾಲಾ ಮಕ್ಕಳನ್ನು ವಿಜ್ಞಾನದತ್ತ ಸೆಳೆಯಲು ಹೊರಟಿರುವ ಆಕಾಶವಾಣಿಯು ಇದೇ ಸೆಪ್ಟೆಂಬರ್ 11ರಿಂದ ಪ್ರತಿ ಭಾನುವಾರ ಬೆಳಿಗ್ಗೆ 9.30ರಿಂದ 10ರವರೆಗೆ `ವಿಜ್ಞಾನಮಯಿ~ ಎಂಬ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಿದೆ.

ಬೆಂಗಳೂರು ಆಕಾಶವಾಣಿ ಕೇಂದ್ರ ನಿರ್ದೇಶಕ ಡಾ.ಚೇತನ್ ನಾಯಕ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ ನಗರದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಒಟ್ಟು 13 ಕಂತುಗಳಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ನವದೆಹಲಿಯ ವಿಜ್ಞಾನ್ ಪ್ರಸಾರ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಂಟಿ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿನಿಯರನ್ನು ಗುರಿಯಾಗಿಟ್ಟುಕೊಂಡು ತಯಾರಿಸಿರುವ ಈ ಸರಣಿ ಕಾರ್ಯಕ್ರಮದಲ್ಲಿ, ಸಮಾಜಕ್ಕೆ ಕೊಡುಗೆ ನೀಡಿರುವ ಮಹಿಳಾ ವಿಜ್ಞಾನಿಗಳು, ತಂತ್ರಜ್ಞರು, ಗೃಹಿಣಿಯರ ಸಾಧನೆಗಳನ್ನು ಬಿಂಬಿಸುವ ನುಡಿಚಿತ್ರಗಳು ಇರುತ್ತವೆ.

ಇದು ಕಳೆದ ಎರಡು ವರ್ಷಗಳಿಂದ ಆಕಾಶವಾಣಿ ಪ್ರಸಾರ ಮಾಡುತ್ತಿರುವ ವಿಜ್ಞಾನ ಸರಣಿ ಕಾರ್ಯಕ್ರಮದ ಮುಂದುವರೆದ ಭಾಗವಾಗಿದೆ. ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುವುದು. ಸರಿ ಉತ್ತರ ನೀಡಿದ 10 ಮಂದಿ ಕೇಳುಗರಿಗೆ ಪರಿಷತ್ತಿನ ಪ್ರಕಟಣೆಯಾದ `ಬಾಲವಿಜ್ಞಾನ~ ಸಂಚಿಕೆಯನ್ನು ಒಂದು ವರ್ಷದವರೆಗೆ ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.