ADVERTISEMENT

ರಾತ್ರಿ 9ರ ನಂತರವೂ ನಿಷೇಧಾಜ್ಞೆ; ಇಬ್ಬರು ಸೇರಿದರೆ ಶಿಸ್ತುಕ್ರಮ !

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:10 IST
Last Updated 24 ಮಾರ್ಚ್ 2020, 10:10 IST

ಬೆಂಗಳೂರು: ‘ಕೊರೊನಾ’ ವೈರಾಣು ಹರಡದಂತೆ ತಡೆಯಲು ಕರೆ ನೀಡಿದ್ದ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದ್ದು, ಅದಾದ ಬಳಿಕವೂ ತಡರಾತ್ರಿ 12ರವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಬೆಳಿಗ್ಗೆಯಿಂದ ನಗರದಲ್ಲಿ ಕರ್ಫ್ಯೂ ಇದ್ದು, ಬಹುತೇಕರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹಲವರು ರಾತ್ರಿ 9ಕ್ಕೆ ಹೊರಗೆ ಬರಲು ಯೋಚಿಸುತ್ತಿದ್ದಾರೆ. ಅವರೆಲ್ಲ ಏಕಾಏಕಿ ಮನೆಯಿಂದ ಹೊರಗೆ ಬಂದರೆ ಪುನಃ ಗುಂಪು ಸೇರುವ ಸಾಧ್ಯತೆ ಇರುತ್ತದೆ. ವೈರಾಣು ಸಹ ಹರಡುವ ಸಂಭವವೂ ಇರುತ್ತದೆ. ಇದೇ ಕಾರಣಕ್ಕೆ ನಗರ ಪೊಲೀಸರ ಕಮಿಷನರ್, ಸೆಕ್ಷನ್ 144 (1) ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಭಾನುವಾರ ಹೊರಡಿಸಿದ್ದಾರೆ.

‘ಮಾ. 22ರ ರಾತ್ರಿ 9ಗಂಟೆಯಿಂದ ತಡರಾತ್ರಿ 12ರವರೆಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು, ಅಂಗಡಿ–ಮುಂಗಟ್ಟುಗಳನ್ನು ತೆರೆಯುವುದು ಹಾಗೂ ವಾತಾವರಣವನ್ನು ಕಲುಷಿತಗೊಳಿಸುವಂಥ ಎಲ್ಲ ರೀತಿಯ ಕೃತ್ಯಗಳನ್ನು ನಿಷೇಧಿಸಿದೆ. ಜನರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು’ ಎಂದು ನಿಷೇಧಾಜ್ಞೆ ಆದೇಶದಲ್ಲಿ ತಿಳಿಸಲಾಗಿದೆ.‌

ADVERTISEMENT

‘ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಷೇಧಾಜ್ಞೆ ಹೊರಡಿಸಲಾಗಿದೆ’ ಎಂದೂ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.