ADVERTISEMENT

24 ಬಾರಿ ಇರಿದು ಕೊಲೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಬೆಂಗಳೂರು: ಪೀಣ್ಯದ ಮುನೇಶ್ವರ ಬ್ಲಾಕ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಉಮೇಶ್‌ ಖನ್ನಾ (22) ಎಂಬಾತನ ಹೊಟ್ಟೆಗೆ 24 ಬಾರಿ ಚಾಕುವಿನಿಂದ ಇರಿದು ಬರ್ಬರ­ವಾಗಿ ಕೊಲೆ ಮಾಡಿದ್ದ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುನೇಶ್ವರಬ್ಲಾಕ್‌ ನಿವಾಸಿಗಳಾದ ಜಾವಿದ್‌, ಶ್ರೀಧರ್‌, ಅರ್ಜುನ್‌ ಮತ್ತು ವೆಂಕಟೇಶ್‌ ಬಂಧಿತರು. ಪ್ರಕರಣದ ಇತರೆ ಆರೋಪಿಗಳಾದ ಜೀವನ್‌ ಅಲಿ ಯಾಸ್ ಅಪ್ಪಿ, ಕಿರಣ್‌ ಮತ್ತು ರಂಜಿತ್‌ ಎಂಬುವರು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದು ವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೊಸ ವರ್ಷದ ಪ್ರಯುಕ್ತ ಜೀವನ್‌ ಡಿ.31ರ ರಾತ್ರಿ ಮುನೇಶ್ವರ ಬ್ಲಾಕ್‌ನಲ್ಲಿ ಮೋಜಿನ ಕೂಟ ಆಯೋ ಜಿಸಿದ್ದ. ಕೂಟದಲ್ಲಿ ಆರೋಪಿಗಳ ಜತೆ ಉಮೇಶ್‌ ಕೂಡ ಪಾಲ್ಗೊಂಡಿದ್ದ. ಈ ವೇಳೆ ಕುಡಿದ ಮತ್ತಿನಲ್ಲಿ ಹಳೆಯ ಗಲಾಟೆಯ ವಿಷಯ ಪ್ರಸ್ತಾಪವಾಗಿದೆ. ಆಗ ಉಮೇಶ್‌, ಜೀವನ್‌ಗೆ ಅವಾಚ್ಯ ಶಬ್ದಗಳಿಂದ ಬೈಯ್ದಿ ದ್ದಾನೆ. ಇದರಿಂದ ಕುಪಿತಗೊಂಡ ಆತ, ಸ್ನೇಹಿತ ರೊಂದಿಗೆ ಸೇರಿಕೊಂಡು ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾವಿದ್‌ ಮತ್ತು ಅರ್ಜುನ್ ಅಪರಾಧ ಹಿನ್ನೆಲೆ ಯುಳ್ಳ ವ್ಯಕ್ತಿಯಾಗಿದ್ದು, ತಮ್ಮ ಬಳಿ ಇದ್ದ ಚಾಕು ತೆಗೆದು ಮನಬಂದಂತೆ ಹೊಟ್ಟೆಗೆ  ಇರಿದಿದ್ದರು. ಬಳಿಕ ಕುಡಿದ ಅಮಲಿನಲ್ಲಿದ್ದ ಉಳಿದವರು ಸಹ ಉಮೇಶ್‌ನ ಹೊಟ್ಟೆ ಮೇಲೆ ತುಳಿದಿದ್ದರು. ಇದರಿಂದ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೋಜಿನ ಕೂಟದಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ಸ್ಥಳೀಯ ಯುವಕರಿಂದ ಮಾಹಿತಿ ಸಂಗ್ರಹಿಸಿ ಆರೋ ಪಿಗಳ ಪತ್ತೆ ಕಾರ್ಯ ಆರಂಭಿಸಲಾಯಿತು. ಘಟನೆ ನಡೆದ ಮರುದಿನವೇ ಜಾವಿದ್‌, ಶ್ರೀಧರ್‌ ಮತ್ತು ಅರ್ಜುನ್‌ನನ್ನು ಬಂಧಿಸಲಾಯಿತು. ಶುಕ್ರವಾರ ಬೆಳಿಗ್ಗೆ ವೆಂಕಟೇಶ್‌ ಸಿಕ್ಕಿ ಬಿದ್ದ. ಬಿ.ಕಾಂ ಪದವೀಧರನಾಗಿದ್ದ ಉಮೇಶ್‌ ವಿರುದ್ಧ ಹಲ್ಲೆ, ಕೊಲೆ ಯತ್ನ ಸೇರಿದಂತೆ ಪೀಣ್ಯ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖ ಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.