ADVERTISEMENT

ಶಾಲಾ ಕಾಲೇಜುಗಳಲ್ಲಿ ಚಿತ್ರಕಲಾ ಸ್ಪರ್ಧೆಗೆ ₹ 25 ಕೋಟಿ

ನವೀಕೃತ ವೆಂಕಟಪ್ಪ ಚಿತ್ರಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 19:49 IST
Last Updated 12 ಜೂನ್ 2025, 19:49 IST
ನವೀಕೃತ ವೆಂಕಟಪ್ಪ ಚಿತ್ರಶಾಲೆಯಲ್ಲಿ ಇರುವ ವೆಂಕಟಪ್ಪ ಅವರ ವೀಣೆಗಳನ್ನು ಡಿ.ಕೆ. ಶಿವಕುಮಾರ್‌, ಎಚ್‌.ಕೆ. ಪಾಟೀಲ ಸೇರಿದಂತೆ ಅತಿಥಿಗಳು ವೀಕ್ಷಿಸಿದರು
ಪ್ರಜಾವಾಣಿ ಚಿತ್ರ
ನವೀಕೃತ ವೆಂಕಟಪ್ಪ ಚಿತ್ರಶಾಲೆಯಲ್ಲಿ ಇರುವ ವೆಂಕಟಪ್ಪ ಅವರ ವೀಣೆಗಳನ್ನು ಡಿ.ಕೆ. ಶಿವಕುಮಾರ್‌, ಎಚ್‌.ಕೆ. ಪಾಟೀಲ ಸೇರಿದಂತೆ ಅತಿಥಿಗಳು ವೀಕ್ಷಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಲೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ರಾಜ್ಯದ ಶಾಲಾ, ಕಾಲೇಜುಗಳ ಮಟ್ಟದಲ್ಲಿ ಮತ್ತು ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಅದಕ್ಕೆ ₹ 25 ಕೋಟಿ ಅನುದಾನ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಗುರುವಾರ ನಡೆದ ನವೀಕೃತ ವೆಂಕಟಪ್ಪ ಚಿತ್ರಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿಯೇ ದೇಶದ ಆಸ್ತಿ. ಕಲೆ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಸ್ಪರ್ಧೆಗಳನ್ನು ನಡೆಸಲಾಗುವುದು. ಸ್ಪರ್ಧೆಯ ರೂಪುರೇಷೆಗಳನ್ನು ತಯಾರು ಮಾಡಲು ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ಡಿಸೆಂಬರ್‌ನಲ್ಲಿ ಸ್ಪರ್ಧೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ADVERTISEMENT

ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ‘ವೆಂಕಟಪ್ಪ ಚಿತ್ರ ಗ್ಯಾಲರಿಯ ನವೀಕರಣಕ್ಕೆ ಸರ್ಕಾರ ಒಂದು ಪೈಸೆಯೂ ಖರ್ಚು ಮಾಡಿಲ್ಲ. ಎಲ್ಲವನ್ನೂ ಬ್ರಿಗೇಡ್‌ ಫೌಂಡೇಷನ್‌ ಭರಿಸಿದೆ. ಇದರ ನೆಲಮಹಡಿಯಲ್ಲಿರುವ ಗ್ಯಾಲರಿಯನ್ನು ಬ್ರಿಗೇಡ್‌ ಗ್ಯಾಲರಿಯನ್ನಾಗಿ ಮಾಡಲು ಅವಕಾಶ ಮಾಡಿಕೊಡುವಂತೆ ಬ್ರಿಗೇಡ್ ಫೌಂಡೇಷನ್‌ ಕೇಳಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವವನ್ನು ಸರ್ಕಾರದ ಮುಂದೆ ಇಡಲಾಗುವುದು’ ಎಂದು ತಿಳಿಸಿದರು.

‘ಯಾವುದೇ ಕೆಲಸಕ್ಕೆ ಶಂಕುಸ್ಥಾಪನೆ ಮಾಡಿದರೆ, ಕಾಮಗಾರಿ ಮುಗಿದು ಉದ್ಘಾಟನೆಗೆ ಸಿದ್ಧವಾಗುವ ಹೊತ್ತಿಗೆ ನಮ್ಮ ಅಧಿಕಾರಾವಧಿ ಮುಗಿದಿರುತ್ತಿತ್ತು. ಇನ್ಯಾರೋ ಉದ್ಘಾಟಿಸುತ್ತಿದ್ದರು. ಆದರೆ, ವೆಂಕಟಪ್ಪ ಗ್ಯಾಲರಿ ನವೀಕರಣ ಕೆಲಸವನ್ನು ಬ್ರಿಗೇಡ್‌ನವರು ಕೇವಲ ಒಂದೂವರೆ ವರ್ಷದ ಒಳಗೆ ಮುಗಿಸಿದ್ದಾರೆ. ಸರ್ಕಾರ ಮತ್ತು ಖಾಸಗಿಯವರು ಪ್ರಾಮಾಣಿಕವಾಗಿ ಕೈಜೋಡಿಸಿದಾಗ ಇದು ಸಾಧ್ಯವಾಗಲಿದೆ‘ ಎಂದು ಬಣ್ಣಿಸಿದರು.

ಲಕ್ಕುಂಡಿಯಲ್ಲಿ ಪ್ರಾಚ್ಯಕಲೆಗಳನ್ನು ಹೊಂದಿರುವ ಅನೇಕ ಗುಡಿಗಳು ಮಣ್ಣಿನಲ್ಲಿ ಮುಚ್ಚಿ ಹೋಗುತ್ತಿವೆ. ಇದರ ಕಡೆಗೆ ಕೂಡ ಬ್ರಿಗೇಡ್‌ ಫೌಂಡೇಷನ್‌ ಗಮನಹರಿಸಬೇಕು. ನಾಲ್ಕೈದು ಗುಡಿಗಳನ್ನು ಇದೇ ರೀತಿ ಅಭಿವೃದ್ಧಿ ಪಡಿಸಬೇಕು. ಇಲ್ಲಿಯ ರೀತಿಯಲ್ಲಿ ಕೋಟ್ಯಂತರ ರೂಪಾಯಿ ಅಲ್ಲಿ ಬೇಕಾಗಿಲ್ಲ. ಕೆಲವೇ ಲಕ್ಷ ರೂಪಾಯಿ ಸಾಕಾಗುತ್ತದೆ ಎಂದು ಹೇಳಿದರು.

ವೆಂಕಟಪ್ಪ ಬಗ್ಗೆ ವಿ.ಎಫ್‌. ಚುಳಕಿ, ಕೆ.ಕೆ. ಹೆಬ್ಬಾರ್‌ ಬಗ್ಗೆ ರಜನಿ ಹೆಬ್ಬಾರ್‌, ರುಮಾಲೆ ಚನ್ನಬಸವಯ್ಯ ಬಗ್ಗೆ ಸಂಜಯ್‌ ಕಬೆ ಮಾತನಾಡಿದರು. ಬ್ರಿಗೇಡ್ ಗ್ರೂಪ್‌ ಚೇರ್‌ಮನ್ ಎಂ.ಆರ್. ಜೈಶಂಕರ್, ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್‌, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಹೀಮ್‌, ನಿರ್ದೇಶಕ ರಾಜೇಂದ್ರ, ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು ಎ., ನಿರ್ದೇಶಕಿ ಸ್ಮಿತಾ ಡಿ. ಉಪಸ್ಥಿತರಿದ್ದರು.

ಇಂದು ಫೋರಂನಿಂದ ‍ಗ್ಯಾಲರಿ ಪ್ರವೇಶ ಸಮಾರಂಭ

ನವೀಕೃತ ವೆಂಕಟಪ್ಪ ಚಿತ್ರಶಾಲೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಕಲಾವಿದರನ್ನು ಕರೆಯದೇ ನಿರ್ಲಕ್ಷಿಸಿರುವುದನ್ನು ವಿರೋಧಿಸಿರುವ ವೆಂಕಟಪ್ಪ ಆರ್ಟ್‌ ಗ್ಯಾಲರಿ ಫೋರಂ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ. ಅಲ್ಲದೇ ಜೂನ್ 13ರಂದು ಬೆಳಿಗ್ಗೆ 11.30ಕ್ಕೆ ‘ವೆಂಕಟಪ್ಪ ಆರ್ಟ್‌ ಗ್ಯಾಲರಿ ಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದೆ. ವೆಂಕಟಪ್ಪ ಗ್ಯಾಲರಿಯನ್ನು ಉಳಿಸಲು ಫೋರಂ ಹೋರಾಟ ನಡೆಸಿತ್ತು. ನವೀಕರಣದ ಸಂದರ್ಭದಲ್ಲಿ ಪ್ರವಾಸೋದ್ಯಮ ಪುರಾತತ್ವ ಇಲಾಖೆಯೊಂದಿಗೆ ಸಂವಹನ ನಡೆಸಿಕೊಂಡು ಬಂದಿತ್ತು. ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಬ್ರಿಗೇಡ್‌ ಫೌಂಡೇಶನ್‌ಗೂ ಸಲಹೆ ನೀಡಿತ್ತು. ಸರ್ಕಾರ ಮತ್ತು ಬ್ರಿಗೇಡ್‌ ನಡುವೆ ಒಪ್ಪಂದದ ವೇಳೆಯೂ ಕೆಲಸ ಮಾಡಿತ್ತು. ಆದರೆ ಉದ್ಘಾಟನೆಗೆ ಆಹ್ವಾನಿತರಲ್ಲಿ ಕೇವಲ ರಾಜಕಾರಣಿಗಳ ಹೆಸರುಗಳು ಮಾತ್ರ ಇವೆ. ಕಲಾವಿದರನ್ನು ಹೊರಗಿಡುವ ಮೂಲಕ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ವೆಂಕಟಪ್ಪ ಆರ್ಟ್‌ ಗ್ಯಾಲರಿ ಫೋರಂ ಕಾರ್ಯಕಾರಿ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.