ADVERTISEMENT

ಸ್ವಾತಂತ್ರ್ಯದ 75ನೇ ವರ್ಷಾಚರಣೆ: ಮೂರು ತಾಣಗಳ ಸುಂದರೀಕರಣ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 17:21 IST
Last Updated 4 ಅಕ್ಟೋಬರ್ 2021, 17:21 IST
ಅಕ್ಕಿತಿಮ್ಮನಹಳ್ಳಿ ಅಂಗನವಾಡಿಗೆ ಹೊಸರೂಪ ನೀಡಿರುವುದು
ಅಕ್ಕಿತಿಮ್ಮನಹಳ್ಳಿ ಅಂಗನವಾಡಿಗೆ ಹೊಸರೂಪ ನೀಡಿರುವುದು   

ಬೆಂಗಳೂರು: ಸ್ವಾತಂತ್ರ್ಯೋತ್ತರ ಭಾರತದ 75 ವರ್ಷಾಚರಣೆ ಅಂಗವಾಗಿ ನಗರದ ಮೂರು ಸಾರ್ವಜನಿಕ ಸ್ಥಳಗಳ ಸುಂದರೀಕರಣ ಯೋಜನೆಯನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಹಮ್ಮಿಕೊಂಡಿದೆ.

ಮೂರು ಸಾರ್ವಜನಿಕ ಸ್ಥಳಗಳನ್ನು ಅಂದಗೊಳಿಸುವ ಮೂಲಕ ಅಲ್ಲಿ ಹೆಚ್ಚು ಜನರು ಬೆರೆಯುವುದಕ್ಕೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.

ಅಂಗನವಾಡಿ ಅಭಿವೃದ್ಧಿ: ಮಕ್ಕಳ ಬದುಕು ಹಸನಾಗಿಸುವ ಉದ್ದೇಶದಿಂದ ಅಂಗನವಾಡಿಗಳ ಪುನರುಜ್ಜೀವನವನ್ನು ನೆರೆ-ಹೊರೆಯವರಿಗೆ ನೆರವು ಸವಾಲು ಕಾರ್ಯಕ್ರಮದಡಿ ಕೈಗೊಳ್ಳಲಾಗಿದೆ. ಚಿಣ್ಣರ ಸ್ನೇಹಿ ಆಟದ ಮೈದಾನ ಕಲ್ಪಿಸುವ ಉದ್ದೇಶದೊಂದಿಗೆ ಅಕ್ಕಿತಿಮ್ಮನಹಳ್ಳಿ ಅಂಗನವಾಡಿ ಮತ್ತು ಶಾಲಾ ಆವರಣವನ್ನು ಅಭಿವೃದ್ಧಿಗೊಳಿಸಲಾಗಿದೆ.

ADVERTISEMENT

ಇಲ್ಲಿ ಮರಳು ತುಂಬಿದ ಆಟದ ಮೈದಾನ ನಿರ್ಮಿಸಿ ಆಟದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ನಡಿಗೆತಾಣ ರೂಪಿಸಲಾಗಿದೆ. ಶಾಲೆಯ ಹೊರಗೋಡೆ ಮತ್ತು ಆವರಣ ಗೋಡೆಯ ಮೇಲೆ ಆಕರ್ಷಕ ಚಿತ್ರಕಲೆ ವಿನ್ಯಾಸ ಅಳವಡಿಸಲಾಗಿದೆ. ಜಾರದಂತೆ ತಡೆಯುವ ವಿಟ್ರಿಫೈಡ್‌ ಟೈಲ್ಸ್‌ಗಳನ್ನು ಇದಕ್ಕೆ ಬಳಸಲಾಗಿದೆ. ಮಕ್ಕಳ ಎತ್ತರಕ್ಕೆ ಅನುಗುಣವಾಗಿ ವಾಶ್‌ ಬೇಸಿನ್‌ಗಳನ್ನು ಹಾಗೂ ರೈಲಿಂಗ್ಸ್‌ಗಳನ್ನು ಅಳವಡಿಸಲಾಗಿದೆ.

ಕಸದ ತಾಣಕ್ಕೆ ಹೊಸ ರೂಪ:ಜನನಿಬಿಡ ಪ್ರದೇಶವಾದ ಕೆ.ಆರ್‌.ಮಾರುಕಟ್ಟೆಯಲ್ಲಿ ಈ ಹಿಂದೆ ಕಸ ಬೇರ್ಪಡಿಸಲು ಹಾಗೂ ಆಟೊರಿಕ್ಷಾ ಮತ್ತು ಬಸ್ಸು ನಿಲ್ಲಿಸಲು ಬಳಸುತ್ತಿದ್ದ ಜಾಗವನ್ನು ಅಂದಗೊಳಿಸಲಾಗಿದೆ. ಈ ಸ್ಥಳದಲ್ಲಿ ‘I Love ಬೆಂಗಳೂರು’ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರಿಗಾಗಿ ಕಲ್ಲಿನಆಕರ್ಷಕ ಆಸನಗಳನ್ನು ಹಾಕಲಾಗಿದೆ. ಜನರನ್ನು ಸೆಳೆಯುವ ತಾಣವಾಗಿ ಹಾಗೂ ಸೆಲ್ಫಿ ಪಾಯಿಂಟ್‌ ಆಗಿ ಮಾರ್ಪಟ್ಟಿದೆ.

ಬಾಲಭವನದ ಚಿಣ್ಣರ ಅಂಗಳಕ್ಕೆ ಹೊಸ ಸ್ಪರ್ಶ

ಬಾಲಭವನದ ಸಭಾಂಗಣದ ಮುಂಬಾಗದಲ್ಲಿ 2 ಸಾವಿರ ಚ.ಅಡಿಯ ಖಾಲಿ ಜಾಗದಲ್ಲಿ ಈ ಹಿಂದೆ ಖಾಲಿ ನೆಲಹಾಸು ಇತ್ತು. ಅಲ್ಲಿ ಮಕ್ಕಳು ಕುಳಿತುಕೊಂಡು ಊಟ ಮಾಡಲು ಹಾಗೂ ಆಟವಾಡಲು ವ್ಯವಸ್ಥೆಗಳಿರಲಿಲ್ಲ. ಇಲ್ಲಿ ಮಕ್ಕಳ ಸ್ನೇಹಿ ವಿನ್ಯಾಸದ ಕಲ್ಲಿನ ಬೆಂಚ್‌ಗಳನ್ನು ಅಳವಡಿಸಲಾಗಿದೆ. ಮಕ್ಕಳು ಆಟವಾಡಲು ನೆಲಹಾಸಿಗೆ ಜಾರುವಿಕೆರಹಿತವಾದ ಗ್ರಾನೈಟ್‌ ಜೋಡಿಸಲಾಗಿದೆ. ಚಿಣ್ಣರಿಗೆ ಆರೋಗ್ಯಕರ ಮತ್ತು ಉಲ್ಲಾಸಕರ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.