ಬೆಂಗಳೂರು:ದಸರಾ ಹಬ್ಬಕ್ಕಾಗಿ ಊರಿಗೆ ಹೋದವರು ಭಾನುವಾರ ರಾತ್ರಿ ಏಕಕಾಲದಲ್ಲಿ ನಗರಕ್ಕೆ ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಯಿತು.
ನೆಲಮಂಗಲ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ (ತುಮಕೂರು ರಸ್ತೆ) ರಾತ್ರಿ 8 ರಿಂದ ತಡರಾತ್ರಿಯವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಚಾಲಕರು ಹಾಗೂ ಪ್ರಯಾಣಿಕರು ಗಂಟೆಗಟ್ಟಲೇ ರಸ್ತೆಯಲ್ಲಿ ಕಾದು ಸುಸ್ತಾದರು.
ನೆಲಮಂಗಲದ ಮಾರಮ್ಮ ದೇವಸ್ಥಾನದಿಂದ ಪಾರ್ಲೆ ಫ್ಯಾಕ್ಟರಿ ಸಮೀಪದ ಟೋಲ್ವರೆಗೂ ವಾಹನಗಳು ನಿಂತಿದ್ದವು. ಟೋಲ್ ಸಂಗ್ರಹ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದೂ ಸಹ ದಟ್ಟಣೆಗೆ ಕಾರಣವಾಯಿತು. ನಾಲ್ಕು ಕಿ.ಮೀ ದೂರದವರೆಗೂ ವಾಹನಗಳು ನಿಂತ ಜಾಗದಲ್ಲಿಯೇ ನಿಂತಿದ್ದವು. ಕೆಲವು ವಾಹನಗಳು ಅಡ್ಡಾದಿಡ್ಡಿ ಚಲಿಸಿದ್ದರಿಂದ ದಟ್ಟಣೆ ಹೆಚ್ಚಿತ್ತು.
ವೈಟ್ಫೀಲ್ಡ್ ಹಾಗೂ ಮಾರತ್ತಹಳ್ಳಿಯ ಹೊರವರ್ತುಲ ರಸ್ತೆಯಲ್ಲೂ ವಿಪರೀತ ದಟ್ಟಣೆ ಕಂಡುಬಂತು. ಕೆಲವಡೆ ಮಾರ್ಗ ಬದಲಾವಣೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.