ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಅವರಣದಲ್ಲಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ನವೀಕರಣಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ₹50 ಲಕ್ಷ ಧನಸಹಾಯ ನೀಡಲಾಯಿತು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಂಘದ ವತಿಯಿಂದ ₹50 ಲಕ್ಷದ ಚೆಕ್ ಅನ್ನು ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರಿಗೆ ಸೋಮವಾರ ಹಸ್ತಾಂತರಿಸಿದರು.
‘ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ನಡುವೆ ಸಾಮರಸ್ಯ ಇರಬೇಕು. ದೇವಸ್ಥಾನದ ನವೀಕರಣದಂತಹ ಕಾಮಗಾರಿಗಳಿಗೆ ನೌಕರರು ಧನಸಹಾಯ ಮಾಡಿರುವುದು ಶ್ಲಾಘನಾರ್ಹ’ ಎಂದು ತುಷಾರ್ ಗಿರಿನಾಥ್ ಹೇಳಿದರು.
‘ಇತಿಹಾಸ ಪ್ರಸಿದ್ಧವಾಗಿರುವ ನೂರಾರು ವರ್ಷದ ದೇವಸ್ಥಾನದ ನವೀಕರಣ ಕಾಮಗಾರಿ ಆರ್ಥಿಕ ಕೊರತೆಯಿಂದ ಕುಂಠಿತಗೊಂಡಿತ್ತು. ಸಂಘದ ಸದಸ್ಯರು ಹಾಗೂ ನೌಕರರಿಂದ ವಂತಿಗೆ ಸಂಗ್ರಹಿಸಿ ಹಣವನ್ನು ನೀಡಲಾಯಿತು’ ಎಂದು ಸಂಘದ ಅಧ್ಯಕ್ಷ ಎ. ಅಮೃತ್ರಾಜ್ ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಕೆ.ಜಿ. ರವಿ, ಎಸ್.ಜಿ. ಸುರೇಶ್, ರಾಮಚಂದ್ರ, ಮಂಜೇಗೌಡ, ಎಚ್.ಬಿ. ಹರೀಶ್, ಮಾರ್ಕೆಟ್ ಮಂಜುನಾಥ್, ಶ್ರೀಧರ್, ಮಂಜುನಾಥ್, ಕೆ. ನರಸಿಂಹ, ಎನ್. ಶಿವಪ್ರಸಾದ್, ಎನ್.ಹರೀಶ್ ಕುಮಾರ್ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.