ಬೆಂಗಳೂರು: ಭಾನುವಾರ ರಾತ್ರಿ ಮದ್ಯ ಕುಡಿದು ವಾಹನ ಚಲಾಯಿಸಿದ 1,367 ಸವಾರರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.
ಮೆಜೆಸ್ಟಿಕ್ ಹಾಗೂ ಎಂ.ಜಿ. ರಸ್ತೆ ಸುತ್ತಮುತ್ತಲ ರಸ್ತೆಗಳಲ್ಲಿ ಹೆಚ್ಚು ಸವಾರರು ಸಿಕ್ಕಿಬಿದ್ದಿದ್ದಾರೆ. 120 ಮಂದಿಯ ಚಾಲನಾ ಪರವಾನಗಿ ರದ್ದುಪಡಿಸುವಂತೆ ಕೋರಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ರಾತ್ರಿ 9 ಗಂಟೆಯಿಂದ ವಿಶೇಷ ಕಾರ್ಯಾಚರಣೆ ನಡೆಸಿ, ಸಾವಿರಾರು ಸವಾರರನ್ನು ತಪಾಸಣೆಗೆ ಒಳಪಡಿಸಿದೆವು ಎಂದು ತಿಳಿಸಿದರು.
ಪೊಲೀಸರ ಜತೆ ಅನುಚಿತ ವರ್ತನೆ: ಪಾನಮತ್ತರಾಗಿದ್ದ ಕೆಲ ಸವಾರರು ಸಂಚಾರ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ್ದಾರೆ.
‘ನಾನು ಯಾರು ಗೊತ್ತಾ? ವಾಹನ ಬಿಡದಿದ್ದರೆ ತೊಂದರೆ ಅನುಭವಿಸ್ತೀರಾ’ ಎಂದು ಬೆದರಿಕೆ ಹಾಕಿದ್ದರು. ಕಬ್ಬನ್ ಉದ್ಯಾನದ ಬಳಿ ಸಿಕ್ಕಿಬಿದ್ದ ಸವಾರರೊಬ್ಬರು ‘ನಾನು ನಟ ಅಂಬರೀಷ್ ಸಹೋದರ. ನನ್ನ ತಂಟೆಗೆ ಬಂದರೆ ಕೆಲಸ ಕಳೆದುಕೊಳ್ಳುತ್ತೀಯಾ’ ಎಂದು ಧಮ್ಕಿ ಹಾಕಿ ನಿಂದಿಸಿದ್ದರು. ಕೆಲ ಕಾಲ ವಾಗ್ವಾದ ನಡೆಸಿದ ಸವಾರ ಅಲ್ಲಿಂದ ಓಡಿಹೋಗಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ಶನಿವಾರ ರಾತ್ರಿ ಕುಡಿದು ವಾಹನ ಚಾಲನೆ ಮಾಡಿದ 1,187 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆರ್.ಹಿತೇಂದ್ರ ಅವರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.