ಬೆಂಗಳೂರು: ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲೂ ಎದೆ ಹಾಲಿನ ಬ್ಯಾಂಕ್ ಆರಂಭಗೊಳ್ಳಲಿದೆ.
ಫೋರ್ಟಿಸ್ ಲಾ ಫೆಮ ಆಸ್ಪತ್ರೆ ಈಗಾಗಲೇ ‘ಅಮಾರ’ ಹೆಸರಿನಲ್ಲಿ ಎದೆ ಹಾಲಿನ ಬ್ಯಾಂಕ್ ಪ್ರಾರಂಭಿಸಿದೆ. ಎದೆ ಹಾಲಿನ ಎರಡನೇ ಬ್ಯಾಂಕ್ ಇದಾಗಲಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಬ್ಯಾಂಕ್.
ಇದನ್ನು ನಿರ್ಮಿಸಲು ವಾಣಿ ವಿಲಾಸ ಆಸ್ಪತ್ರೆ 2016ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ನವೆಂಬರ್ನಲ್ಲಿ ಅನುಮತಿ ಸಿಕ್ಕಿದ್ದು, ಸದ್ಯ ಯೋಜನೆಗೆ ರೂಪುರೇಷೆ ಸಿದ್ಧವಾಗುತ್ತಿದೆ. ‘ಕಾಮಗಾರಿ ಪೂರ್ಣಗೊಳ್ಳಲು ಒಂದು ವರ್ಷ ಬೇಕು. 2019ರ ಫೆಬ್ರುವರಿ ಅಂತ್ಯಕ್ಕೆ ಬ್ಯಾಂಕ್ ಶುರುವಾಗಲಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಗೀತಾ ಶಿವಮೂರ್ತಿ ತಿಳಿಸಿದರು.
‘ಫೋರ್ಟಿಸ್ ಆಸ್ಪತ್ರೆಯಲ್ಲಿ ಇರುವುದು ಸಣ್ಣ ಪ್ರಮಾಣದ ಬ್ಯಾಂಕ್. ನಮ್ಮಲ್ಲಿ ಹೆರಿಗೆಗಳ ಪ್ರಮಾಣ ಹೆಚ್ಚಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್ ನಿರ್ಮಿಸುವ ಆಲೋಚನೆ ಇದೆ’ ಎಂದು ಶಿಶು ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಸರಳಾ ಸಭಾಪತಿ ತಿಳಿಸಿದರು.
‘ನವಜಾತ ಶಿಶು ತೀವ್ರ ನಿಗಾ ಘಟಕದ (ಎನ್ಐಸಿಯು) ಪಕ್ಕದಲ್ಲಿರುವ ಕೊಠಡಿಯಲ್ಲಿ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಿದ್ದೇವೆ. ಎಂಜಿನಿಯರ್ಗಳು, ಅಮಾರ ಬ್ಯಾಂಕ್ ತಜ್ಞರು ವೀಕ್ಷಿಸಿ ಸ್ಥಳ ಆಯ್ಕೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಹಾಲಿನ ಸಂಸ್ಕರಣೆಗೆ ಯಾವ ರೀತಿಯ ಉಪಕರಣಗಳು ಬೇಕು, ವಿನ್ಯಾಸ ಹೇಗಿರಬೇಕು ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಸೇಲಂ ವೈದ್ಯಕೀಯ ಕಾಲೇಜು, ಚೆನ್ನೈನ ಶಿಶು ಆರೋಗ್ಯ ಸಂಸ್ಥೆ, ತಮಿಳುನಾಡಿನ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿ, ಕಾರ್ಯಚಟುವಟಿಕೆಯನ್ನು ವೀಕ್ಷಿಸುತ್ತೇವೆ’ ಎಂದರು.
ಅರಿವು ಕಾರ್ಯಕ್ರಮ: ‘ಹಾಲುಣಿಸುವ ಬಗ್ಗೆ ಬಾಣಂತಿಯರಿಗೆ ಅರಿವಿನ ಕಾರ್ಯಕ್ರಮ ಮಾಡುತ್ತೇವೆ. ಮಗು ಎಷ್ಟು ಹಾಲು ಕುಡಿಯುತ್ತದೆಯೊ ಅಷ್ಟೇ ಪ್ರಮಾಣದ ಹಾಲು ತಾಯಂದಿರಿಗೆ ಬರುತ್ತದೆ. ಹೆಚ್ಚು ಹಾಲು ಬರುತ್ತದೆ ಎನ್ನುವುದು ತಪ್ಪು ಕಲ್ಪನೆ. ಯಾವಾಗ ಮಗು ಹಾಲನ್ನು ಎಳೆದುಕೊಳ್ಳಲು ಆಗುವುದಿಲ್ಲವೊ ಆಗ ಅದನ್ನು ಚೆಲ್ಲಬೇಕಾಗುತ್ತದೆ. ಇಲ್ಲವಾದರೆ ಹಾಲು ಬತ್ತಿಹೋಗುತ್ತದೆ. ಈ ರೀತಿಯ ಹಾಲನ್ನು ನಾವು ಸಂಗ್ರಹಿಸಬಹುದು’ ಎಂದು ಹೇಳಿದರು.
‘ಅವಧಿಪೂರ್ವ ಶಿಶುಗಳಿಗೆ ಹಾಗೂ ತಾಯಿ ಇಲ್ಲದ ಮಕ್ಕಳಿಗೆ ಹಾಲುಣಿಸಲು ಈ ಬ್ಯಾಂಕ್ ನೆರವಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ಹುಟ್ಟಿ, ಇಲ್ಲಿ ತಪಾಸಣೆಗೆ ಬರುವ ಮಕ್ಕಳ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಇಂತಹ ಪ್ರಕರಣಗಳಲ್ಲಿ ಶೇ 75ರಷ್ಟು ತಾಯಂದಿರು ಮಗುವಿನ ಜೊತೆಗೆ ಬರಲು ಆಗುವುದಿಲ್ಲ. ಹಾಗಾಗಿ ಅಂತಹ ಮಕ್ಕಳಿಗೆ ತಾಯಿ ಬರುವ ತನಕ ಎದೆ ಹಾಲುಣಿಸಲು ಬ್ಯಾಂಕ್ ನೆರವಾಗುತ್ತದೆ. ಈ ಸೇವೆ ಉಚಿತವಾಗಿರುತ್ತದೆ’ ಎಂದರು.
ಸಿಬ್ಬಂದಿ ನಿಯೋಜನೆ: ‘ಬ್ಯಾಂಕ್ಗೆ ಒಬ್ಬರು ಶಿಶು ತಜ್ಞರು, ಒಬ್ಬರು ಸೂಕ್ಷ್ಮಜೀವಿ ವಿಜ್ಞಾನಿ, ನಾಲ್ವರು ನರ್ಸ್ಗಳು, ನಾಲ್ವರು ಸಮಾಲೋಚಕರು, ಇಬ್ಬರು ಗ್ರೂಪ್ ಡಿ ನೌಕರರನ್ನು ನಿಯೋಜಿಸಲು ಯೋಜಿಸಲಾಗಿದೆ’ ಎಂದು ಸರಳಾ ತಿಳಿಸಿದರು.
*
ಬ್ಯಾಂಕ್ ಸ್ಥಾಪಿಸುವ ಕುರಿತು ಸಮಗ್ರ ಯೋಜನಾ ವರದಿ ರೂಪಿಸಲಾಗುತ್ತಿದೆ. ವರದಿ ಸಲ್ಲಿಸಿದ ನಂತರ ಹಣಕಾಸು ನಿಯೋಜನೆ ಮಾಡಲು ಸಾಧ್ಯ.
–ಡಾ. ಎಸ್. ಸಚ್ಚಿದಾನಂದ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.