ಬೆಂಗಳೂರು: ‘ವಾಸ್ತವ ಸವಾಲುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಪರಿಷ್ಕೃತ ಮಹಾಯೋಜನೆ 2031ನ್ನು ಶೇ 20ರಷ್ಟು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಎಂಜಿನಿಯರ್ ನಾಗರಾಜ್ ಅಭಿಪ್ರಾಯಪಟ್ಟರು.
ಭಾರತೀಯ ಎಂಜಿನಿಯರ್ಗಳ ಸಂಸ್ಥೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಪರಿಷ್ಕೃತ ಮಹಾಯೋಜನೆ 2031’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕೀಯ ಹಿತಾಸಕ್ತಿಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿದ್ದರೆ ಮಾತ್ರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯ. ಇಲ್ಲದಿದ್ದರೆ ಅವು ಯೋಜನೆಗಳಾಗಿಯೇ ಉಳಿಯುತ್ತವೆ’ ಎಂದು ಹೇಳಿದರು.
ಭಾರತೀಯ ಎಂಜಿನಿಯರ್ಗಳ ಸಂಸ್ಥೆಯ ಸದಸ್ಯ ರಾಜಗೋಪಾಲ್, ‘ನಗರಕ್ಕೆ ಪೂರೈಕೆಯಾಗುತ್ತಿರುವ 135 ಕೋಟಿ ಲೀಟರ್ ನೀರನ್ನು ಈಗಿರುವ 96 ಲಕ್ಷ ಜನಸಂಖ್ಯೆಗೆ ದಿನ ಬಿಟ್ಟು ದಿನ ಹರಿಸಲಾಗುತ್ತಿದೆ. 2031ರ ವೇಳೆಗೆ ಜನಸಂಖ್ಯೆ 2 ಕೋಟಿ ಆಗುತ್ತದೆ ಎಂದು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಆಗಿನ ನೀರಿನ ಬೇಡಿಕೆಯನ್ನು ಹೇಗೆ ಪೂರೈಸಲಾಗುತ್ತದೆ ಎಂಬ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ’ ಎಂದು ದೂರಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ. ಜಸ್ಮೈಲ್ ಸಿಂಗ್, ‘ಯಾವುದೇ ಕಠಿಣ ನಿಯಮಗಳನ್ನು ವಿಧಿಸದೆ ಬಡಾವಣೆಗಳನ್ನು ನಿರ್ಮಿಸಲು ಖಾಸಗಿಯವರಿಗೆ ಅನುಮತಿ ನೀಡಿದ್ದು, ಈ ನಗರಕ್ಕೆ ಮಾಡಿರುವ ಬಹುದೊಡ್ಡ ಅನ್ಯಾಯ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬಿಲ್ಡರ್ಗಳು ಯೋಜನೆಯಿಲ್ಲದೆ ಬಡಾವಣೆಗಳನ್ನು ನಿರ್ಮಿಸಿದರು. ಹೀಗಾಗಿ ಕೆಲವು ಪ್ರದೇಶಗಳು ಕಿಷ್ಕಿಂಧೆಯಂತಾಗಿವೆ. ಇದರಿಂದ ಉಂಟಾದ ಪರಿಣಾಮಗಳನ್ನು (ನೀರಿನ ಸಮಸ್ಯೆ, ದಟ್ಟಣೆ ಸಮಸ್ಯೆ) ಸಮರ್ಪಕವಾಗಿ ಎದುರಿಸಲು ಸರ್ಕಾರ ವಿಫಲವಾಗಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.