ADVERTISEMENT

ದಲಿತರ ದಮನಕ್ಕೆ ಸಂಚು: ಆರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 20:11 IST
Last Updated 4 ಜನವರಿ 2018, 20:11 IST
ಬಿಎಸ್‌ಪಿ ಕಚೇರಿಯಲ್ಲಿ ನಡೆದ ಸಾವಿತ್ರಿಬಾ ಫುಲೆ ಜನ್ಮಾದಿನಾಚರಣೆ ಕಾರ್ಯಕ್ರಮದಲ್ಲಿ ಮುಖಂಡರು ಭಾಗವಹಿಸಿದ್ದರು.
ಬಿಎಸ್‌ಪಿ ಕಚೇರಿಯಲ್ಲಿ ನಡೆದ ಸಾವಿತ್ರಿಬಾ ಫುಲೆ ಜನ್ಮಾದಿನಾಚರಣೆ ಕಾರ್ಯಕ್ರಮದಲ್ಲಿ ಮುಖಂಡರು ಭಾಗವಹಿಸಿದ್ದರು.   

ದೇವನಹಳ್ಳಿ: ದೇಶದಲ್ಲಿ ಬಹುಸಂಖ್ಯಾತರಾಗಿರುವ ದಲಿತರನ್ನು ಎಲ್ಲಾಕ್ಷೇತ್ರಗಳಿಂದ ದಮನ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಘಟಕ ಕಾರ್ಯದರ್ಶಿ ನಂದಗುಂದ ವೆಂಕಟೇಶ್ ಆರೋಪಿಸಿದರು.

ಇಲ್ಲಿನ ಬಿಎಸ್‌ಪಿ ಕಚೇರಿಯಲ್ಲಿ ಗುರುವಾರ ನಡೆದ ಅಕ್ಷರ ಮಾತೆ ಸಾವಿತ್ರಿ ಬಾ ಫುಲೆ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಬಹುತೇಕ ರಾಜ್ಯಗಳಲ್ಲಿ ದಲಿತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಸಂವಿಧಾನ ಬದಲಾಯಿಸಲು ಹೊರಟರೆ ಇನ್ನೊಂದು ಕೋರೇಗಾಂವ್ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ದಲಿತರ ಚಾರಿತ್ರಿಕ ಘಟನೆಗಳನ್ನು ಮುಚ್ಚಿಡುವುದು ಪರಂಪರೆಯಿಂದ ನಡೆದುಕೊಂಡು ಬರುತ್ತಿದೆ. 1818ರಿಂದಲೇ ಕ್ರಾಂತಿಕಾರಿ ಬೆಳೆವಣಿಗೆಗಳು ನಡೆದಿವೆ. ಸಾವಿತ್ರಿ ಬಾ ಫುಲೆ ಮೌನ ಕ್ರಾಂತಿಯ ಮೂಲಕ ದಲಿತರಿಗೆ ಬೆಳಕು ತೋರಿಸಿದ್ದಾರೆ ಎಂದರು.

ದಲಿತರ ಬಗ್ಗೆ ಕಾಳಜಿ ಇಟ್ಟುಕೊಂಡು ಅಡಳಿತ ನಡೆಸಿದ ಕಾನ್ಸಿರಾಂ ಅಮರರಾಗಿದ್ದಾರೆ. ಪಕ್ಷ ಸಂಘಟಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಮತದಾರರಿಗೆ ತಿಳಿಸಲು ಜ.18ರಂದು ಬೈಕ್ ಜಾಥಾ ನಡೆಸಲಾಗುತ್ತದೆ ಎಂದರು.

ಜಿಲ್ಲಾ ಬಹುಜನ ವಿದ್ಯಾರ್ಥಿ ಸಂಚಾಲಕ ಮಹೇಶ್ ದಾಸ್ ಮಾತನಾಡಿ, ತಲಾಂತರದಿಂದ ಶೋಷಣೆಗೆ ಒಳಗಾಗುತ್ತಿರುವ ಶೋಷಿತ ಸಮುದಾಯಕ್ಕೆ ನಿಜವಾದ ಶತ್ರು ಅಜ್ಞಾನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿ.ಎಸ್.ಪಿ ಸಂಚಾಲಕ ತಿಮ್ಮರಾಜು, ತಾಲ್ಲೂಕು ಸಂಯೋಜಕ ಸಂತೋಷ್, ಜಿಲ್ಲಾ ಖಚಾಂಚಿ ನರಸಿಂಹಮೂರ್ತಿ ಹಾಗೂ ವಿವಿಧ ಘಟಕ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.