ADVERTISEMENT

ದಾಖಲೆಗಳ ದೃಢೀಕರಣ: ವೈದ್ಯನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:48 IST
Last Updated 5 ಜನವರಿ 2018, 19:48 IST

ಬೆಂಗಳೂರು: ಅಸಲಿ ದಾಖಲೆಗಳನ್ನು ಪರಿಶೀಲಿಸದೆ, ಅಪರಿಚಿತರ ದಾಖಲೆಗಳನ್ನು ದೃಢೀಕರಣ ಮಾಡಿಕೊಟ್ಟ ಆರೋಪದಡಿ ವೈದ್ಯ ರಾಮಮೂರ್ತಿ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಸಹಾಯಕ ಪ್ರಾಧ್ಯಾಪಕರೂ ಆಗಿರುವ ರಾಮಮೂರ್ತಿ ವಿರುದ್ಧ ಯುಐಡಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಅಶೋಕ್‌ ಲೆನಿನ್ ದೂರು ನೀಡಿದ್ದಾರೆ.

ಆಧಾರ್ ಕಾಯ್ದೆಯ ಸೆಕ್ಷನ್ 34 ಹಾಗೂ ವಂಚನೆ (ಐಪಿಸಿ 419, 420), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವ (ಐಪಿಸಿ 471) ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.

ADVERTISEMENT

‘ಕೆಲ ಸಾರ್ವಜನಿಕರ ವಾಸದ ಬಗ್ಗೆ ಅಸಲಿ ದಾಖಲೆಗಳನ್ನು ಪರಿಶೀಲಿಸದೆ ರಾಮಮೂರ್ತಿ ಅವರು ಗುರುತು ಹಾಗೂ ವಿಳಾಸದ ಪರಿಚಯ ಪತ್ರ ನೀಡಿದ್ದಾರೆ. ಆ ಪತ್ರ ಪಡೆದುಕೊಂಡ ಸಾರ್ವಜನಿಕರು, ಯಶವಂತಪುರದ ಆಧಾರ್ ನೋಂದಣಿ ಕೇಂದ್ರದ ಮೂಲಕ ಆಧಾರ್‌ ಸಂಖ್ಯೆ ಪಡೆದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಕೆಲ ವ್ಯಕ್ತಿಗಳ ಆಧಾರ್ ಸಂಖ್ಯೆ ಪರಿಶೀಲನೆ ವೇಳೆ, ಅವರು ನಕಲಿ ದಾಖಲೆಗಳನ್ನು ಅಸಲಿ ಎಂದು ಕೊಟ್ಟಿದ್ದು ಗೊತ್ತಾಗಿದೆ. ಇದಕ್ಕೆ ರಾಮಮೂರ್ತಿ ಸಹಕಾರ ನೀಡಿದ್ದಾರೆ’ ಎಂದು ದೂರಲಾಗಿದೆ.

ಆರ್‌ಟಿಒ ಕಚೇರಿಗೂ ಬಳಕೆ: ‘ವೈದ್ಯರು ನೀಡಿದ್ದ ದೃಢೀಕರಣ ದಾಖಲೆಗಳನ್ನು ಕೆಲ ಸಾರ್ವಜನಿಕರು, ಆರ್‌ಟಿಒ ಕಚೇರಿಗಳಿಗೂ ಕೊಟ್ಟು ವಂಚಿಸಿದ್ದಾರೆ. ವಾಹನ ನೋಂದಣಿ, ಚಾಲನಾ ಪರವಾನಗಿ ಪಡೆದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಈ ಆರೋಪದ ಬಗ್ಗೆ ಯುಐಡಿ ಅಧಿಕಾರಿಗಳು ಮತ್ತಷ್ಟು ಮಾಹಿತಿ ನೀಡಬೇಕಿದೆ. ಅದು ಕೈ ಸೇರಿದ ಬಳಿಕ ತನಿಖೆ ಚುರುಕುಗೊಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.