ADVERTISEMENT

ಪಿಂಚಣಿ ಹಣ ಕೊಡದಿದ್ದಕ್ಕೆ ತಾಯಿಯ ಕೊಂದ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

ಬೆಂಗಳೂರು: ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಗೋಡೆಗೆ ತಲೆ ಗುದ್ದಿಸಿ 80 ವರ್ಷದ ತಾಯಿಯನ್ನು ಹತ್ಯೆಗೈದಿದ್ದ ಆಟೊ ಚಾಲಕ ಸೆಲ್ವರಾಜ್ (55) ಆಡುಗೋಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆಡುಗೋಡಿಯ ಅಂಬೇಡ್ಕರ್‌ನಗರ ನಿವಾಸಿ ಲಕ್ಷ್ಮಿ ಕೊಲೆಯಾದವರು. ಜ.4ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ಜಗಳ ತೆಗೆದಿದ್ದ ಮಗ, ಗೋಡೆಗೆ ತಲೆ ಗುದ್ದಿಸಿ ಲಕ್ಷ್ಮಿ ಅವರನ್ನು ಕೊಂದಿದ್ದ. ನಂತರ ಹೊರಗಿನಿಂದ ಚಿಲಕ ಹಾಕಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಲಕ್ಷ್ಮಿ ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಹಿರಿಯ ಮಗ ಸೆಲ್ವರಾಜ್ ಹೊರತುಪಡಿಸಿ ಉಳಿದೆಲ್ಲ ಮಕ್ಕಳು ವಿವಾಹವಾಗಿ ಪ್ರತ್ಯೇಕ
ವಾಗಿ ವಾಸವಿದ್ದಾರೆ. ಆರೋಪಿ ಅವಿವಾಹಿತನಾಗಿದ್ದು, ತಾಯಿ ಜತೆ ನೆಲೆಸಿದ್ದ.

ADVERTISEMENT

ನಿತ್ಯ ಪಾನಮತ್ತನಾಗಿ ಮನೆಗೆ ಬರುತ್ತಿದ್ದ ಆತನಿಗೆ, ಇತ್ತೀಚೆಗೆ ತಾಯಿಯ ಪಿಂಚಣಿ ಹಣದ ಮೇಲೆ ಕಣ್ಣು ಬಿದ್ದಿತ್ತು. ಜ.4ರ ಮಧ್ಯಾಹ್ನ ಸಹ ಆ ಹಣ ಕೊಡುವಂತೆ ಗಲಾಟೆ ಪ್ರಾರಂಭಿಸಿದ್ದ. ಅದಕ್ಕೆ ಒಪ್ಪದಿದ್ದಾಗ ಕೊಂದು ಹಣ ತೆಗೆದುಕೊಂಡು ಹೋಗಿದ್ದ.

ಆರೋಪಿಯ ತಮ್ಮನ ಹೆಂಡತಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಸೆಲ್ವರಾಜ್‌ನ ಗೆಳೆಯರ ಬಳಗವನ್ನು ವಿಚಾರಣೆ ನಡೆಸಿ, ಅವರು ನೀಡಿದ ಸುಳಿವಿನಿಂದ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.