ADVERTISEMENT

ಮೇಲ್ವಿಚಾರಕರು, ಚಾಲಕರ ಕೆಲಸ ನಾಳೆಯಿಂದ ಸ್ಥಗಿತ

ಪಾಲಿಕೆಯಿಂದ ವೇತನ ನೇರ ಪಾವತಿ ಮಾಡುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

ಬೆಂಗಳೂರು: ಪಾಲಿಕೆ ವತಿಯಿಂದಲೇ ವೇತನ ನೇರ ಪಾವತಿ ಮಾಡುವಂತೆ ಒತ್ತಾಯಿಸಿ ಕಸದ ವಿಲೇವಾರಿ ಮೇಲ್ವಿಚಾರಕರು, ಆಟೊ ಮತ್ತು ಕಾಂಪ್ಯಾಕ್ಟರ್‌ಗಳ ಚಾಲಕರು ಹಾಗೂ ಸಹಾಯಕರು ಇದೇ 11ರಿಂದ ಕೆಲಸ ಸ್ಥಗಿತಗೊಳಿಸಲಿದ್ದಾರೆ.

‘ಮೇಲ್ವಿಚಾರಕರು, ಆಟೊ, ಕಾಂಪ್ಯಾಕ್ಟರ್‌ಗಳ ಚಾಲಕರು ಹಾಗೂ ಸಹಾಯಕರು‌ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಪೌರಕಾರ್ಮಿಕರಿಗೆ ಜನವರಿಯಿಂದ ವೇತನ ನೇರ ಪಾವತಿ ಮಾಡುವುದಾಗಿ ಪಾಲಿಕೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ನಮ್ಮನ್ನೂ ಪೌರಕಾರ್ಮಿಕರೆಂದು ಪರಿಗಣಿಸಬೇಕು’ ಎಂದು ಕರ್ನಾಟಕ ಪ್ರದೇಶ ಗುತ್ತಿಗೆ ಪೌರಕಾರ್ಮಿಕರು, ಚಾಲಕರು ಹಾಗೂ ಮೇಲ್ವಿಚಾರಕರ ಸಂಘದ ಅಧ್ಯಕ್ಷ ಸಿ.ನಾಗರಾಜು ಒತ್ತಾಯಿಸಿದರು.

ನಗರದಲ್ಲಿ ಮೇಲ್ವಿಚಾರಕರು 800, ಆಟೊ ಚಾಲಕರು ಹಾಗೂ ಸಹಾಯಕರು ಸುಮಾರು 8,000, ಕಾಂಪ್ಯಾಕ್ಟರ್‌ ಚಾಲಕರು ಮತ್ತು ಸಹಾಯಕರು ಸುಮಾರು 1,200 ಇದ್ದಾರೆ. ಮೇಲ್ವಿಚಾರಕರಿಗೆ ₹13,500, ಕಾಂಪ್ಯಾಕ್ಟರ್‌ ಚಾಲಕರು ಹಾಗೂ ಸಹಾಯಕರಿಗೆ ₹12,700, ಆಟೊ ಚಾಲಕರಿಗೆ ₹12,300 ವೇತನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಪಾಲಿಕೆಯ ತಾರತಮ್ಯ ನೀತಿಯಿಂದಾಗಿ ಬೀದಿಪಾಲಾಗುವ ಸ್ಥಿತಿ ಉದ್ಭವಿಸಿದೆ. ಗುತ್ತಿಗೆದಾರರು ಆರ್ಥಿಕ ಹೊರೆಯ ನೆಪದಲ್ಲಿ ಮೇಲ್ವಿಚಾರಕರು, ಚಾಲಕರನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. ಎಲ್ಲರೂ ಅಭದ್ರತೆಯ ವಾತಾವರಣದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವೀಯತೆಯ ದೃಷ್ಟಿಯಿಂದ ನಮಗೂ ವೇತನ ನೇರ ಪಾವತಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಕೆಲಸಕ್ಕೆ ಗುರುವಾರದಿಂದ ಗೈರು ಹಾಜರಾಗುತ್ತೇವೆ. ಆದರೆ, ಯಾವುದೇ ಧರಣಿ, ಪ್ರತಿಭಟನೆ ನಡೆಸುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.