ADVERTISEMENT

ಹೊಣೆ ಮರೆತ ಶಾಸಕರು, ಸಂಸದರು: ಅಮಿತ್ ಷಾ ಗರಂ

ನಾಲ್ವರು ಉಸ್ತುವಾರಿಗಳಿಗೆ ತಲಾ ಎಂಟು ಜಿಲ್ಲೆಗಳ ಜವಾಬ್ದಾರಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ಹೊಣೆ ಮರೆತ ಶಾಸಕರು, ಸಂಸದರು: ಅಮಿತ್ ಷಾ ಗರಂ
ಹೊಣೆ ಮರೆತ ಶಾಸಕರು, ಸಂಸದರು: ಅಮಿತ್ ಷಾ ಗರಂ   

ಬೆಂಗಳೂರು: ವಹಿಸಿದ ಹೊಣೆಯನ್ನು ನಿಭಾಯಿಸದ ಸಂಸದರು, ಶಾಸಕರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗಡಸು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚುನಾವಣಾ ಪೂರ್ವ ಸಿದ್ಧತೆ, ಪಕ್ಷದ ಸಂಘಟನೆ ಕುರಿತು ಚರ್ಚಿಸಲು ಯಲಹಂಕ ಸಮೀಪದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಶಾಸಕರು, ಸಂಸದರು, ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಮಂಗಳವಾರ ಷಾ ಕರೆದಿದ್ದರು.

ವಿಧಾನಸಭಾ ಸದಸ್ಯರಿಗೆ ತಮ್ಮ  ಕ್ಷೇತ್ರದ ಜತೆಗೆ ಪಕ್ಕದ ವಿಧಾನಸಭಾ ಕ್ಷೇತ್ರ, ಸಂಸದರಿಗೆ ಎರಡು ವಿಧಾನಸಭಾ ಕ್ಷೇತ್ರ, ವಿಧಾನಪರಿಷತ್ತಿನ ಸದಸ್ಯರಿಗೆ ಒಂದು ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಉಸ್ತುವಾರಿಯನ್ನು ಅಮಿತ್ ಷಾ ವಹಿಸಿದ್ದು ಆಗಸ್ಟ್‌ ತಿಂಗಳಿನಲ್ಲಿ ನಡೆಸಿದ್ದ ಸಭೆಯ ವೇಳೆ ಪಕ್ಷದ ಬಲವರ್ಧನೆಗೆ ಏನೇನು ಮಾಡಬೇಕು ಎಂದು ಸ್ಪಷ್ಟ ಸೂಚನೆಯನ್ನು ಅವರು ನೀಡಿದ್ದರು.

ADVERTISEMENT

ಸಭೆ ಆರಂಭವಾಗುತ್ತಿದ್ದಂತೆ ಈ ಕುರಿತು ಅಮಿತ್‌ ಷಾ ಪ್ರಶ್ನಿಸಿದಾಗ ತಬ್ಬಿಬ್ಬಾಗುವ ಸರದಿ ಉಸ್ತುವಾರಿಗಳದ್ದಾಗಿತ್ತು. ನಿರ್ದಿಷ್ಟವಾಗಿ ಕೆಲವರ ಹೆಸರು ಕರೆದ ಷಾ, ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಉತ್ತರ ಹೇಳಲು ತಡವರಿಸಿದಾಗ ಷಾ ಗರಂ ಆದರು ಎಂದು ಮೂಲಗಳು ತಿಳಿಸಿವೆ.

‘ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಕಾರಣಕ್ಕೆ ನಿಮ್ಮನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ. ಏನೋ ಉಸ್ತುವಾರಿ ಕೊಟ್ಟಿದ್ದಾರೆ, ಮಾಡಿದರಾಯಿತು ಬಿಡಿ ಎಂಬ ಧೋರಣೆ ಅನೇಕರಲ್ಲಿ ಇದೆ. ಇದನ್ನು ಸಹಿಸುವುದಿಲ್ಲ. ಇನ್ನು ಮುಂದೆ ಪಕ್ಷದ ಚುನಾವಣಾ ಉಸ್ತುವಾರಿಗಳು ನೀಡುವ ಗುರಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪಕ್ಷದ ಬಲವರ್ಧನೆ ಮಾಡಬೇಕು’ ಎಂದು ಷಾ ನಿಷ್ಠುರವಾಗಿ ತಾಕೀತು ಮಾಡಿದರು ಎಂದು ಮೂಲಗಳು ವಿವರಿಸಿವೆ.

ಉಸ್ತುವಾರಿ, ಸಹ ಉಸ್ತುವಾರಿಗಳಾದ ಪ್ರಕಾಶ್ ಜಾವಡೇಕರ್, ಪೀಯೂಷ್ ಗೋಯಲ್, ಮುರುಳೀಧರರಾವ್ ಹಾಗೂ ಪುರಂದರೇಶ್ವರಿ ಅವರಿಗೆ ತಲಾ ಎಂಟು ಜಿಲ್ಲೆಗಳ ಉಸ್ತುವಾರಿ ವಹಿಸಿರುವ ಷಾ, ಫೆಬ್ರುವರಿ 2 ರೊಳಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.