ಬೆಂಗಳೂರು: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರವು ಮಾದಿಗ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ಪುರಭವನದ ಎದುರು ಪ್ರತಿಭಟನೆ ನಡೆಯಿತು.
ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಿತಿಯ ಪದಾಧಿಕಾರಿಗಳು ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಸಿಂಧೂ ನಾಗರಿಕತೆಯನ್ನು ನಿರ್ಮಿಸಿ ರಾಜರಾಗಿದ್ದ ಮಾದಿಗ, ಚಮ್ಮಾರ, ಸಮಗಾರ, ಡೋಹರ, ನಾಗ ಮುಂತಾದ ಆದಿ ದ್ರಾವಿಡ ಜನಾಂಗದವರು ಇಂದು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಸ್ಥಾನಮಾನದಿಂದ ವಂಚಿತರಾಗಿದ್ದಾರೆ. ಇವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ’ ಎಂದು ಪ್ರತಿಭಟನಾಕಾರರು ಹೇಳಿದರು.
‘ಮಾದಿಗರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರಗಳ ಬಗ್ಗೆ ನ್ಯಾಯಮೂರ್ತಿ ಸದಾಶಿವ ಆಯೋಗವು ಈಗಾಗಲೇ ವರದಿ ಸಲ್ಲಿಸಿದ್ದಾರೆ. ಅದನ್ನು ಅಂಗೀಕರಿಸಬೇಕು. ಕೆಲವು ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದರು. ಮಾರ್ಕಂಡಮುನಿ ಸ್ವಾಮೀಜಿ, ಷಡಕ್ಷರ ಮುನಿಸ್ವಾಮೀಜಿ, ಬಸವಮೂರ್ತಿ ಬ್ರಹ್ಮೇಂದ್ರ ಸ್ವಾಮೀಜಿ, ಸಂಘಟನೆಯ ಉಪಾಧ್ಯಕ್ಷ ಎಚ್.ವೆಂಕಟೇಶ್, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ ನೇತೃತ್ವ ವಹಿಸಿದ್ದರು.
***
‘ವರದಿ ವಿರೋಧಿಸುವವರ ತಲೆ ಕತ್ತರಿಸಿದರೆ ₹1ಲಕ್ಷ ಬಹುಮಾನ’
ಕೊಪ್ಪಳ: ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸುವವರ ತಲೆ ಕಡಿದು ತಂದರೆ ₹1 ಲಕ್ಷ ಬಹುಮಾನ ನೀಡುವುದಾಗಿ ‘ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿ ಹೋರಾಟ ಸಮಿತಿ’ಯ ಮುಖಂಡ ಹಾಲೇಶ್ ಕಂದಾರಿ ಹೇಳಿದರು.
ವರದಿ ಜಾರಿಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಅರೆಬೆತ್ತಲೆ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ವರದಿ ಜಾರಿಗೆ ಕೆಲವರು ವಿರೋಧಿಸುತ್ತಿದ್ದಾರೆ. ಅಂಥವರ ರುಂಡ ಚೆಂಡಾಡಬೇಕು. ಮೀಸಲಾತಿ ಅವರ ಅಪ್ಪನ ಆಸ್ತಿಯಲ್ಲ. ನಮ್ಮ ಅಜ್ಜ ಡಾ.ಬಿ.ಆರ್. ಅಂಬೇಡ್ಕರ್ ಕೊಟ್ಟ ಆಸ್ತಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.