ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ ಆಂಬುಲೆನ್ಸ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:38 IST
Last Updated 12 ಜನವರಿ 2018, 19:38 IST
ಸುಸಜ್ಜಿತ ಬಸ್‌ ಆಂಬುಲೆನ್ಸ್‌  –ಪ್ರಜಾವಾಣಿ ಚಿತ್ರ
ಸುಸಜ್ಜಿತ ಬಸ್‌ ಆಂಬುಲೆನ್ಸ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಆಂಬುಲೆನ್ಸ್‌ ಸೇವೆಯನ್ನು ಆರಂಭಿಸಿದೆ.

ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ 1062ಕ್ಕೆ ಕರೆ ಮಾಡಿದರೆ ಈ ಆಂಬುಲೆನ್ಸ್‌ ಸ್ಥಳಕ್ಕೆ ಧಾವಿಸಲಿದೆ. ಅದರಲ್ಲಿರುವ ನುರಿತ ನುರಿತ ಶುಶ್ರೂಷಕರು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ, ಸಮೀಪದ ಆಸ್ಪತ್ರೆಗೆ ದಾಖಲಿಸಲಿದ್ದಾರೆ.

ಈ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿಯು ಗೋಲ್ಡನ್ ಅವರ್ ಟ್ರಸ್ಟ್‌ ಜೊತೆ ಶುಕ್ರವಾರ ಒಪ್ಪಂದ ಮಾಡಿಕೊಂಡಿತು. ಸದ್ಯ ಬೆಂಗಳೂರಿನಲ್ಲಿ ಒಂದು ಆಂಬುಲೆನ್ಸ್‌ ಕಾರ್ಯಾರಂಭ ಮಾಡಿದೆ. 16 ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ADVERTISEMENT

10 ಆಂಬುಲೆನ್ಸ್‌ಗಳು ನಿರ್ವಹಿಸು ವಷ್ಟು ಕೆಲಸವನ್ನು ಬಸ್‌ ಆಂಬುಲೆನ್ಸ್‌ ನಿರ್ವಹಿಸಲಿದೆ. ತೀವ್ರವಾಗಿ ಗಾಯಗೊಂಡ ಎಂಟು ಜನರನ್ನು ಹಾಗೂ ಸಣ್ಣಪುಟ್ಟ ಗಾಯಗೊಂಡ 16 ಮಂದಿಯನ್ನು ಇದರಲ್ಲಿ ಏಕಕಾಲದಲ್ಲಿ ಸಾಗಿಸಬಹುದು. ತುರ್ತು ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು, ಗಾಲಿಕುರ್ಚಿ ಇರುತ್ತವೆ. ಆಟೋಮೇಟೆಡ್‌ ಎಕ್ಸ್‌ಟರ್ನಲ್‌ ಡಿಫೈಬ್ರಿಲೇಟರ್ಸ್‌, ಇಸಿಜಿ/ ಪಲ್ಸ್‌ ಆಕ್ಸಿ ಮೆಟ್ರಿ ಮೀಟರ್‌, ಕೇಂದ್ರೀಕೃತ ಸಕ್ಷನ್‌ ಸೌಲಭ್ಯ, ಪ್ರಥಮ ಚಿಕಿತ್ಸೆ ಕಿಟ್‌, ಜಂಬೊ ಆಕ್ಸಿಜನ್‌ ಸಿಲಿಂಡರ್‌, ಎಕ್ಸ್‌ಟ್ರಿಕೇಷನ್‌ ಉಪಕರಣಗಳೂ ಇದರಲ್ಲಿ ಇರಲಿವೆ.

ಜಿಪಿಎಸ್‌ ವ್ಯವಸ್ಥೆ, ವೈರ್‌ಲೆಸ್‌ ಸಂವಹನ ಸಾಧನ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನೂ ಇದರಲ್ಲಿ ಅಳವಡಿಸಲಾಗಿದೆ.

ಗೋಲ್ಡನ್‌ ಅವರ್‌ ಕಿಟ್‌:  ತುರ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ‘ಗೋಲ್ಡನ್‌ ಅವರ್‌ ಕಿಟ್’ ಕೂಡಾ ಇದರಲ್ಲಿದೆ. ಅಪಘಾತ ಸಂಭವಿಸಿದಾಗ ಕಬ್ಬಿಣದ ಸರಳುಗಳ ನಡುವೆ ಕೈ–ಕಾಲು ಸಿಲುಕಿಕೊಂಡರೆ ಬಿಡಿಸಲು ನೆರವಾಗುವ ಕಟರ್‌ಗಳೂ ಇರುತ್ತವೆ. ಕಂಪ್ಯೂಟರ್‌ಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಬಸ್‌ನೊಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.