ಬೆಂಗಳೂರು: ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಪಡೆಯುವುದು ಕಡ್ಡಾಯ ಎಂದು ಬಿಜೆಪಿ ಪ್ರಮುಖರ ಸಭೆಯಲ್ಲಿ ರಾಜ್ಯ ಉಸ್ತುವಾರಿ ವಹಿಸಿರುವ ಕೇಂದ್ರ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
ಕಾರ್ಯಕರ್ತರ ಅಭಿಪ್ರಾಯದ ಆಧರಿಸಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗುತ್ತದೆ. ಆ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಗುರುವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ತಿಳಿಸಿದರು.
ಕಾಂಗ್ರೆಸ್ ವೈಫಲ್ಯಗಳನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ಮುಟ್ಟಿಸಬೇಕು. ಕಾಂಗ್ರೆಸ್ ಪಕ್ಷ ವೀರಶೈವ– ಲಿಂಗಾಯತ ಧರ್ಮ ಒಡೆಯುವ ವಿಷಯವನ್ನು ಕೈಗೆತ್ತಿಕೊಂಡಿತು. ಅದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆ ಸುಮ್ಮನಾಯಿತು. ಜಾತಿ ಮತ್ತು ಧರ್ಮದ ವಿಚಾರದಲ್ಲಿ ಒಡಕುಂಟು ಮಾಡುತ್ತಿರುವುದನ್ನು ಜನರ ಮುಂದೆ ಬಯಲು ಮಾಡಬೇಕು ಎಂದು ಸಭೆಯಲ್ಲಿ ಗೋಯಲ್ ಸಲಹೆ ನೀಡಿದರು.
‘ಯಾವುದೇ ಪಕ್ಷದ ಮುಖಂಡರು ಅವರಾಗಿಯೇ ಬಂದರೆ ಸೇರಿಸಿಕೊಳ್ಳಿ. ನಮ್ಮ ಪಕ್ಷ ಅಭ್ಯರ್ಥಿಗಳು ಗಟ್ಟಿ ಇರುವ ಕಡೆಗಳಲ್ಲಿ ತೆಗೆದುಕೊಳ್ಳಬೇಡಿ. ಯಾರಿಗೂ ಟಿಕೆಟ್ ಭರವಸೆ ನೀಡಿ ಸೇರಿಸಿಕೊಳ್ಳಬೇಡಿ’ ಎಂದೂ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಫೆಬ್ರುವರಿ 4 ರಂದು ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಕನಿಷ್ಠ ಐದು ಲಕ್ಷ ಜನರನ್ನು ಸೇರಿಸಬೇಕು. ಇದಕ್ಕೆ ಅಗತ್ಯ ತಯಾರಿ ನಡೆಸಿಕೊಳ್ಳಬೇಕು ಎಂಬ ಸೂಚನೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.