ADVERTISEMENT

ಮಾಧ್ಯಮಕ್ಕೆ ಮಾಹಿತಿ ಕೊಟ್ಟಿದ್ದಕ್ಕೆ ರೌಡಿ ಪಟ್ಟ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST

ಬೆಂಗಳೂರು: ಡಾರ್ಜಿಲಿಂಗ್‌ನ ಅಣ್ಣ–ತಂಗಿ ಮೇಲೆ ಪುಂಡರು ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿದ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಮಾಧ್ಯಮಗಳಿಗೆ ಕೊಟ್ಟಿದ್ದಕ್ಕೆ, ಇಂದಿರಾನಗರ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದು ಕಿರುಕುಳ ನೀಡಿದರು ಎಂದು ರಾಮಚಂದ್ರ ಎಂಬುವರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂದಿರಾನಗರ ಸಮೀಪದ ಮೋಟ್ಟನಪಾಳ್ಯ ನಿವಾಸಿಯಾದ ನಾನು, ಮನೆ ಸಮೀಪವೇ ಅಂಗಡಿ ಇಟ್ಟುಕೊಂಡಿದ್ದೇನೆ. ಡಿ.31ರ ರಾತ್ರಿ ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅಣ್ಣ–ತಂಗಿ ಮೇಲೆ 20ಕ್ಕೂ ಹೆಚ್ಚು ಪುಂಡರು ಹಲ್ಲೆ ನಡೆಸಿದ್ದರು. ಆ ದೃಶ್ಯ ನಮ್ಮ ಕಟ್ಟಡದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಪರಿಚಿತ ಮಾಧ್ಯಮ ಸ್ನೇಹಿತರಿಗೆ ಕೊಟ್ಟಿದ್ದೆ’ ಎಂದು ಹೇಳಿದರು.

‘ಜ.16ರಂದು ಆ ಸುದ್ದಿಯು ವಿಡಿಯೊ ಸಮೇತ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆ ನಂತರ ಸಿ.ಸಿ ಟಿ.ವಿ ಕ್ಯಾಮೆರಾದ ಡಿವಿಆರ್ ಕೇಳುವ ನೆಪದಲ್ಲಿ ಠಾಣೆಗೆ ಕರೆಸಿಕೊಂಡ ಇಂದಿರಾನಗರ ಪೊಲೀಸರು, ನನ್ನನ್ನೂ ಆರೋಪಿಯಂತೆ ನೋಡಿದರು. ಆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ವ್ಯಕ್ತಿಗಳ ಜತೆ ನನ್ನನ್ನೂ ನಿಲ್ಲಿಸಿ ಫೋಟೊ ತೆಗೆದರು. ಆ ಫೋಟೊವನ್ನು ಮಾಧ್ಯಮಗಳಿಗೆ ಕೊಟ್ಟು ಮರ್ಯಾದೆ ತೆಗೆದರು.’

ADVERTISEMENT

‘ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರ ಹೆಸರು–ವಿವರಗಳನ್ನು ಗೋಪ್ಯವಾಗಿ ಇಡಬೇಕಾದ ಪೊಲೀಸರು, ಮಾಹಿತಿದಾರರನ್ನೇ ಆರೋಪಿ
ಯನ್ನಾಗಿ ಮಾಡುವುದು ಎಷ್ಟು ಸರಿ. ‘ದೃಶ್ಯಗಳನ್ನು ನಮಗೆ ಕೊಡುವುದನ್ನು ಬಿಟ್ಟು, ಮಾಧ್ಯಮದವರಿಗೆ ಕೊಟ್ಟಿದ್ದಕ್ಕೆ ನಿನಗೆ ಈ ಶಿಕ್ಷೆ. ಇಷ್ಟಕ್ಕೆ ಸುಮ್ಮನೆ ಬಿಡು
ವುದಿಲ್ಲ. ರೌಡಿ ಪಟ್ಟ ಕಟ್ಟಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಪೊಲೀಸರು ಬೆದರಿಸಿದ್ದಾರೆ. ಈ ರೀತಿ ದರ್ಪ ತೋರಿರುವ ಸಿಬ್ಬಂದಿ ವಿರುದ್ಧ ಕಮಿಷನರ್ ತಕ್ಷಣ ಕ್ರಮ ಜರುಗಿಸಬೇಕು’ ಎಂದು ರಾಮಚಂದ್ರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.