ಬೆಂಗಳೂರು: ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಲಾಲ್ಬಾಗ್ ಉದ್ಯಾನದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 50 ಸಾವಿರಕ್ಕೂ ಅಧಿಕ ಪುಷ್ಪಪ್ರಿಯರು ಭೇಟಿ ನೀಡಿದರು.
‘ಭಾನುವಾರ ಒಟ್ಟು 23 ಲಕ್ಷ ಹಣ ಸಂಗ್ರಹವಾಗಿದೆ. ಮೂರು ದಿನಗಳಲ್ಲಿ ಸುಮಾರು 85 ಸಾವಿರ ಜನ ಭೇಟಿ ನೀಡಿದ್ದು, ₹36 ಲಕ್ಷ ಸಂಗ್ರಹವಾಗಿದೆ. ಉದ್ಯಾನಕ್ಕೆ ಬರುವವರಿಗೆ ತೊಂದರೆಯಾಗದಂತೆ ಮಣ್ಣಿನ ರಸ್ತೆಗಳಿಗೆ ನೀರು ಸಿಂಪಡಿಸಲಾಯಿತು. ಹೀಗಾಗಿ ದೂಳಿನ ಸಮಸ್ಯೆಯಿರಲಿಲ್ಲ’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.
ಜನ ಹೆಚ್ಚಿದ್ದರಿಂದ ಉದ್ಯಾನದ ನಾಲ್ಕು ದ್ವಾರಗಳಲ್ಲಿ ಟಿಕೆಟ್ ಕೌಂಟರ್ಗಳನ್ನು ಹೆಚ್ಚಿಸಲಾಗಿತ್ತು. ನರ್ಸರಿಗಳ ಬಳಿ ಸಸಿಗಳನ್ನು ಖರೀದಿಸುವಲ್ಲಿ, ಮಾರಾಟ ಮಳಿಗೆಗಳ ಬಳಿ ಜನಸಂದಣಿ ಹೆಚ್ಚಾಗಿತ್ತು. ಪ್ರದರ್ಶನದ ವೇಳೆ ಯಾವುದೇ ರೀತಿಯ ಅವ್ಯವಸ್ಥೆಗಳು ನಡೆಯದಂತೆ ಆಯೋಜಕರು ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.
ಭಾನುವಾರ ಬೆಳಗ್ಗೆ ಬ್ಯಾಂಡ್ಸ್ಟ್ಯಾಂಡ್ನಲ್ಲಿ ಉದ್ಯಾನದಲ್ಲಿ ಉದಯರಾಗ ಮತ್ತು ಸಂಜೆ ಸಂಧ್ಯಾರಾಗಗಳನ್ನು ಏರ್ಪಡಿಸಲಾಗಿತ್ತು. ಮುಂಡರಗಿಯ ಕಲಾವಿದರು ಹಾಗೂ ಬೆಂಗಳೂರಿನ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು.
ಮಲ್ಲಿಕಾರ್ಜುನ ಖರ್ಗೆ ಲಾಲ್ಬಾಗ್ಗೆ ಭೇಟಿ
ಸಂಸದ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಸಂಜೆ ಲಾಲ್ಬಾಗ್ಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು. ಗಾಜಿನ ಮನೆಯಲ್ಲಿ ನಿರ್ಮಿಸಲಾಗಿರುವ ಶ್ರವಣಬೆಳಗೊಳದ ಇಂದ್ರಗಿರಿ ಹಾಗೂ ಗೊಮ್ಮಟಮೂರ್ತಿಯ ಪ್ರತಿಕೃತಿಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.