ಬೆಂಗಳೂರು: ನಗರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ರೇಸ್ಕೋರ್ಸ್ ರಸ್ತೆಯಲ್ಲಿ ಸ್ಕೂಟರ್ಗೆ ಬಿಬಿಎಂಪಿಯ ಕಸ ಸಾಗಣೆ ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಬಿ.ಎನ್.ಸಾಹಿತ್ಯ (24) ಮೃತಪಟ್ಟಿದ್ದಾರೆ.
ರಾಜಾಜಿನಗರದ ನಿವಾಸಿಯಾದ ಅವರು ಪ್ರಿಂಟಿಂಗ್ ಪ್ರೆಸ್ ಮಾಲೀಕ ನರಸರಾಜ್ ಅವರ ಮಗಳು. ಹೆಸರುಘಟ್ಟ ಬಳಿಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರ್ ಓದುತ್ತಿದ್ದ ಅವರು ಕನ್ನಿಂಗ್ ಹ್ಯಾಮ್ ರಸ್ತೆ ಬಳಿಯ ಕಂಪನಿಯೊಂದರಲ್ಲಿ ತರಬೇತಿ ಪಡೆಯಲು ತೆರಳುತ್ತಿದ್ದರು.
‘ಅಡ್ಡಾದಿಡ್ಡಿಯಾಗಿ ಲಾರಿ ಚಾಲನೆ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಸ್ಥಳದಲ್ಲಿದ್ದವರು ಹೇಳಿಕೆ ಕೊಟ್ಟಿದ್ದಾರೆ. ಅವಘಡದ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ವಿವರಿಸಿದರು.
ಕಾರ್ಮಿಕ ಸಾವು: ಬನ್ನೇರುಘಟ್ಟ ರಸ್ತೆಯಲ್ಲಿ ಭಾನುವಾರ ರಾತ್ರಿ ಕೆಟ್ಟು ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಗುದ್ದಿದ್ದರಿಂದ ಕಾರ್ಮಿಕ ಶಿವಣ್ಣ (37) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಚಿತ್ರದುರ್ಗದ ಶಿವಣ್ಣ, ಪತ್ನಿ ಹಾಗೂ ಮಕ್ಕಳೊಂದಿಗೆ ಹೊಸಪಾಳ್ಯದಲ್ಲಿ ವಾಸವಿದ್ದರು. ಪೀಠೋಪಕರಣಗಳ ಸಾಗಣೆಯ ಕೆಲಸ ಮಾಡುತ್ತಿದ್ದರು.
ಪೀಠೋಪಕರಣಗಳನ್ನು ಗ್ರಾಹಕರ ಮನೆಗೆ ಇಳಿಸಿ ಹಿಂದಿರುಗುವಾಗ ಬನ್ನೇರುಘಟ್ಟ ರಸ್ತೆಯ ಟಿ.ಜಾನ್ ಕಾಲೇಜು ಬಳಿ ಅವರ ಲಾರಿ ಕೆಟ್ಟುನಿಂತಿತ್ತು. ಆಗ, ಶಿವಣ್ಣ ಹಾಗೂ ಮತ್ತೊಬ್ಬ ಕಾರ್ಮಿಕ ನಾಗರಾಜ್ ವಾಹನವನ್ನು ಹಿಂಬದಿಯಿಂದ ತಳ್ಳಲು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.