ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಏರ್ ಇಂಡಿಯಾ ಸ್ಯಾಟ್ಸ್ ಕಂಪನಿಯವರು ಏಕಾಏಕಿ ಕೆಲಸದಿಂದ ತೆಗೆಯುತ್ತಿದ್ದಾರೆ’ ಎಂದು ಆರೋಪಿಸಿದ ನೌಕರರು, ಕಂಪನಿಯ ಎದುರು ಸೋಮವಾರ ಬೆಳಿಗ್ಗೆ ಜಮಾಯಿಸಿ ಆಕ್ರೋಶ
ವ್ಯಕ್ತಪಡಿಸಿದರು.
600ಕ್ಕೂ ಹೆಚ್ಚು ನೌಕರರು, ಕಂಪನಿ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು, ನೌಕರರು ಹಾಗೂ ಕಂಪನಿ ಅಧಿಕಾರಿಗಳ ಜತೆ ಸಂಧಾನ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
‘ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಕಂಪನಿಯ ಪ್ರವೇಶಕ್ಕೆ ಪಾಸ್ ಹೊಂದುವುದು ಕಡ್ಡಾಯ. 6 ತಿಂಗಳು ಅಥವಾ ವರ್ಷಕ್ಕೊಮ್ಮೆ ಪಾಸ್ ನವೀಕರಣ ಮಾಡಲಾಗುತ್ತದೆ. ಆದರೆ, ಈಗ 45 ಮಂದಿಯ ಪಾಸ್ ನವೀಕರಣ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.
‘ಸ್ಥಳೀಯರನ್ನು ಕೆಲಸದಿಂದ ತೆಗೆಯುವ ಉದ್ದೇಶದಿಂದ ಕಂಪನಿಯವರು ಈ ರೀತಿ ಮಾಡುತ್ತಿದ್ದಾರೆ. ಈ ವರ್ತನೆ ಖಂಡಿಸಿ ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದೆವು. ಅದೇ ಕಾರಣ ಮುಂದಿಟ್ಟುಕೊಂಡು ಹಲವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ನೌಕರರು, ಕಾರ್ಮಿಕ ಇಲಾಖೆಯಲ್ಲಿ ಮೊಕದ್ದಮೆ ಹೂಡಿದ್ದು ವಿಚಾರಣೆ ನಡೆಯುತ್ತಿದೆ’ ಎಂದರು.
ವಿಮಾನ ನಿಲ್ದಾಣದ ಪೊಲೀಸರು, ‘ಅಧಿಕಾರಿಗಳ ಜತೆ ಮಾತನಾಡಿ ನವೀಕರಣ ಮಾಡಿಸಿಕೊಟ್ಟೆವು. ಎಲ್ಲರೂ ಪುನಃ ಕೆಲಸಕ್ಕೆ ಹಾಜರಾದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.