ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ನಕಲಿ ಮತದಾರರನ್ನು ಸೇರಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ ನೇತೃತ್ವದ ತಂಡ ಹೊರಮಾವಿನಲ್ಲಿನ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿತು.
‘ಜನವರಿ 26 ಹಾಗೂ 28 ರಂದು ಸರ್ಕಾರಿ ರಜೆ ಇತ್ತು. ಉಪವಲಯಕ್ಕೆ ಸಲ್ಲಿಕೆಯಾದ 6,000ಕ್ಕೂ ಹೆಚ್ಚು ನಕಲಿ ಅರ್ಜಿಗಳನ್ನು ಮತದಾರ ಪಟ್ಟಿಗೆ ರಾತ್ರೋರಾತ್ರಿ ಸೇರ್ಪಡೆ ಮಾಡಿದ್ದಾರೆ’ ಎಂದು ನಂದೀಶ್ ರೆಡ್ಡಿ ಆರೋಪಿಸಿದರು.
‘ಕಂದಾಯ ನಿರೀಕ್ಷಕರು ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡಿ ಮಹಜರು ಮಾಡದೆ, ಅರ್ಜಿದಾರರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದ್ದಾರೆ’ ಎಂದರು
'ಜನ್ಮದಿನ, ವಿಳಾಸ, ಸಂಬಂಧಗಳನ್ನು ದೃಢೀಕರಿಸುವ ದಾಖಲೆಗಳಿಲ್ಲದಿದ್ದರೂ ಅರ್ಜಿಗಳನ್ನೂ ಪುರಸ್ಕರಿಸಿರುವುದು ಸಂಶಯಗಳಿಗೆ ಎಡೆಮಾಡಿದೆ' ಎಂದರು.
‘ಸದ್ಯ ಕೆ.ಆರ್.ಪುರದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಳ್ಳುವ ಅರ್ಜಿದಾರರಿಂದ, ಹಿಂದಿನ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೊರತೆಗೆದಿರುವ ಪ್ರಮಾಣ ಪತ್ರವನ್ನೂ ಪಡೆಯದೆ ಅರ್ಜಿಗಳನ್ನು ಅನುಮೋದಿಸಿದ್ದಾರೆ. ಚುನಾವಣಾ ಆಯೋಗ ಸೂಚಿಸಿರುವ ಕಟ್ಟು ನಿಟ್ಟಾದ ನಿಯಮಗಳನ್ನು ಗಾಳಿಗೆ ತೂರಿ ಮತದಾರರ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ’ ಎಂದು ದೂರಿದರು.
‘ದಾಖಲಾತಿಗಳನ್ನು ಪರಿಶೀಲಿಸಿಯೇ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗುತ್ತಿದೆ. ಯಾವುದೇ ರೀತಿಯ ಅಕ್ರಮ ಎಸಗಿಲ್ಲ’ ಎಂದು ಸಹಾಯಕ ಕಂದಾಯ ಅಧಿಕಾರಿ ಚಂಗಲ್ರಾಯಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.