ಬೆಂಗಳೂರು: ರಾಮಸೇವಾ ಮಂಡಳಿ ವತಿಯಿಂದ ಆಯೋಜಿಸುವ 80ನೇ ರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವದ ಸಭಾಂಗಣ ನಿರ್ಮಾಣಕ್ಕೆ ಕೋಟೆ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ಭೂಮಿ ಪೂಜೆ ನಡೆಯಿತು.
‘6,000 ಜನರಿಗೆ ಆಸನ ವ್ಯವಸ್ಥೆ ಹೊಂದಿರುವ ಅತ್ಯಾಧುನಿಕ ತಾತ್ಕಾಲಿಕ ಸಭಾಂಗಣ ನಿರ್ಮಿಸುತ್ತೇವೆ. ಮೂಲಸೌಕರ್ಯ ಹಾಗೂ ಭದ್ರತೆಗೂ ಆದ್ಯತೆ ನೀಡಲಾಗುತ್ತದೆ’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ವರದರಾಜ್ ತಿಳಿಸಿದರು.
‘ಮೈಸೂರು ಮಂಜುನಾಥ್ ನೇತೃತ್ವದಲ್ಲಿ 80 ಕಲಾವಿದರು ಒಂದೇ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸುವುದು ಈ ಸಂಗೀತೋತ್ಸವದ ಪ್ರಮುಖ ಆಕರ್ಷಣೆ. 2 ಲಕ್ಷಕ್ಕೂ ಹೆಚ್ಚು ಶೋತ್ರುಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.
ಸಂಗೀತೋತ್ಸವ ಮಾರ್ಚ್ 25ರಂದು ಆರಂಭವಾಗಲಿದೆ. ನಾಡಿನ ಪ್ರಖ್ಯಾತ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ. ಗಾಯಕ ಕೆ.ಜೆ.ಯೇಸುದಾಸ್, ಪೀಟಿಲು ವಾದಕರಾದ ಲಾಲ್ಗುಡಿ ಜಿ.ಜೆ.ಆರ್ ಕೃಷ್ಣನ್ –ಲಾಲ್ಗುಡಿ ಜಿ.ಜೆ.ಆರ್ ವಿಜಯಲಕ್ಷ್ಮಿ, ಮ್ಯಾಂಡೊಲಿನ್ ವಾದಕ ಯು.ರಾಜೇಶ್, ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಸೇರಿದಂತೆ 300ಕ್ಕೂ ಹೆಚ್ಚು ಕಲಾವಿದರು ಉತ್ಸವದಲ್ಲಿ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ.
ಟಿಕೆಟ್ ದರ: ₹300 ಹಾಗೂ ₹500. ಆನ್ಲೈನ್ನಲ್ಲೂ ( www.ramanavamitickets.org) ಟಿಕೆಟ್ ಖರೀದಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.