ಬೆಂಗಳೂರು: ಎಂ.ಜಿ.ರಸ್ತೆ ಬಳಿಯ ವಿಪ್ರೊ ಕಚೇರಿಯ ಕಟ್ಟಡದ 4ನೇ ಮಹಡಿಯಿಂದ ಹಾರಿ ಕಾರ್ಯನಿರ್ವಾಹಕ ಲೆಕ್ಕಾಧಿಕಾರಿ ಎಚ್.ಎಲ್.ಹರೀಶ್ (40) ಸೋಮವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎನ್.ಆರ್.ಗಾರ್ಡ್ನ ಚೋಳೂರುಪಾಳ್ಯದ ನಿವಾಸಿಯಾದ ಅವರು ವಿಪ್ರೊ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
‘ಬೆಳಿಗ್ಗೆ 8.40ರ ಸುಮಾರಿಗೆ ಕಚೇರಿಗೆ ಬಂದ ಅವರು ನೇರವಾಗಿ 4ನೇ ಮಹಡಿಗೆ ಹೋಗಿ ಕೆಳಗೆ ಹಾರಿದ್ದಾರೆ. ಕೆಳಗಡೆ ನಿಂತಿದ್ದ ಕಾರಿನ ಮೇಲೆ ಬಿದ್ದಿದ್ದರಿಂದ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಮಲ್ಯ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ’ ಎಂದು ಕಬ್ಬನ್ ಪಾರ್ಕ್ ಪೊಲೀಸರು ತಿಳಿಸಿದರು.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿಲ್ಲ ಎಂದು ಮೃತರ ಸಹೋದರ ಎಚ್.ಎಲ್.ಪ್ರವೀಣ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಕಚೇರಿಯಲ್ಲೂ ಯಾವುದೇ ರೀತಿಯ ಕಿರುಕುಳ ಇರಲಿಲ್ಲ ಎಂದು ಹರೀಶ್ ಸಹೋದ್ಯೋಗಿಗಳು ಹೇಳಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.