ಬೆಂಗಳೂರು: ಬೆಳ್ಳಂದೂರಿನ ‘ಶೋಭಾ ಡೈಸಿ’ ಅಪಾರ್ಟ್ಮೆಂಟ್ ಸಮುಚ್ಚಯದ 9ನೇ ಮಹಡಿಯಿಂದ ಬಿದ್ದು ಸಾಫ್ಟ್ವೇರ್ ಎಂಜಿನಿಯರ್ ಗೌತಮ್ ಕುಮಾರ್ (28) ಮೃತಪಟ್ಟಿದ್ದಾರೆ.
ಪಟ್ನಾದ ಗೌತಮ್, ಐದು ವರ್ಷಗಳ ಹಿಂದೆ ನಗರಕ್ಕೆ ಬಂದು ಕಾಡುಬೀಸನಹಳ್ಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೂವರು ಸ್ನೇಹಿತರ ಜತೆ ಸೇರಿ ಅಪಾರ್ಟ್ಮೆಂಟ್ನ 9ನೇ ಮಹಡಿಯಲ್ಲಿ ಫ್ಲ್ಯಾಟ್ ಖರೀದಿಸಿದ್ದ ಅವರು, ರಾತ್ರಿ ಗೆಳೆಯರ ಜತೆ ಪಾರ್ಟಿ ಮಾಡುತ್ತಿದ್ದರು.
11 ಗಂಟೆ ಸುಮಾರಿಗೆ ಪೋಷಕರಿಂದ ಕರೆ ಬಂದಿದ್ದು, ಗೌತಮ್ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೊರಗೆ ಬಂದಿದ್ದರು. ಪಾನಮತ್ತರಾಗಿದ್ದ ಅವರು, ಮಹಡಿ ಅಂಚಿನಲ್ಲಿ ನಿಂತಿದ್ದಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದರು.
ಅವರು ಕೆಳಗೆ ಬಿದ್ದಿದ್ದನ್ನು ನೋಡಿದ ಸೆಕ್ಯುರಿಟಿ ಗಾರ್ಡ್, ಕೂಡಲೇ ಅಪಾರ್ಟ್ಮೆಂಟ್ನ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದರು. ಸ್ವಲ್ಪ ಸಮಯದಲ್ಲೇ ಅಲ್ಲಿನ ಕೆಲ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಅತ್ತ ಫ್ಲ್ಯಾಟ್ನೊಳಗೆ ಪಾರ್ಟಿ ಮುಂದುವರಿಸಿದ್ದ ಸ್ನೇಹಿತರು, 15 ನಿಮಿಷವಾದರೂ ವಾಪಸಾಗದ ಕಾರಣಕ್ಕೆ ಗೌತಮ್ಗೆ ಕರೆ ಮಾಡಿದ್ದರು. ಮೊಬೈಲ್ ರಿಂಗ್ ಆಗುತ್ತಿದ್ದರೂ ಪ್ರತಿಕ್ರಿಯೆ ಬಾರದಿದ್ದಾಗ, ಹುಡುಕಿಕೊಂಡು ಹೊರಗೆ ಬಂದಿದ್ದರು.
ಅಪಾರ್ಟ್ಮೆಂಟ್ ಆವರಣದಲ್ಲಿ ಜನ ಸೇರಿರುವುದನ್ನು ನೋಡಿದ ಅವರು, ಕೆಳಗೆ ಓಡಿ ಬಂದಾಗ ವಿಷಯ ಗೊತ್ತಾಗಿತ್ತು. ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.