ಬೆಂಗಳೂರು: ನಗರದ ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ನೀರಿನ ತೊಟ್ಟಿಗೆ ಬಿದ್ದು ಅಪಾಯದಲ್ಲಿ ಸಿಲುಕಿದ್ದ 2 ವರ್ಷ 6 ತಿಂಗಳ ಮಗುವೊಂದನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ್ದಾರೆ.
ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಎ.ಆರ್. ನಾಗರಾಜ ಅವರು ಮಗುವನ್ನು ರಕ್ಷಿಸಿದ್ದು ಅವರ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಾಗರಾಜ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
‘ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ನಾಗರಾಜ ಅವರು ಕರ್ತವ್ಯಕ್ಕೆ ಅದೇ ಮಾರ್ಗವಾಗಿ ತೆರಳುತ್ತಿದ್ದರು. ಆ ಸಮಯದಲ್ಲಿ ಮಗುವೊಂದು ನೀರಿನ ತೊಟ್ಟಿಗೆ ಬಿದ್ದು ಅಪಾಯದಲ್ಲಿತ್ತು. ಸ್ಥಳದಲ್ಲಿದ್ದವರು ಮಗುವನ್ನು ಕಾಪಾಡುವಂತೆ ಮನವಿ ಮಾಡುತ್ತಿದ್ದರು. ಸ್ಥಳೀಯರ ಎಲ್ಲ ಪ್ರಯತ್ನಗಳು ವಿಫಲವಾಗಿ, ಮಗು ನೀರು ಕುಡಿಯುತ್ತಿತ್ತು. ಜನರ ಕೂಗಾಟ ಕೇಳಿಸಿಕೊಂಡ ಪಿಎಸ್ಐ, ತಮ್ಮ ವಾಹನ ನಿಲುಗಡೆ ಮಾಡಿ 10 ಅಡಿ ಆಳದ ಸಂಪ್ಗೆ ಇಳಿದು ಮಗುವನ್ನು ರಕ್ಷಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
‘ಮಗುವಿನ ರಕ್ಷಣೆ ಮಾಡುವುದು ಸ್ವಲ್ಪ ತಡವಾಗಿದ್ದರೂ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಇತ್ತು’ ಎಂದು ಸ್ಥಳೀಯರು ತಿಳಿಸಿದರು. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.