ಬೆಂಗಳೂರು: ಲೋಕಾಯುಕ್ತರ ಆದೇಶದ ಮೇರೆಗೆ ಅಬ್ಬಿಗೆರೆ ಕೆರೆಯ ಸರ್ವೆ ಕಾರ್ಯ ಶನಿವಾರ ಆರಂಭವಾಯಿತು.
ಭೂ ಮಾಪನ ಇಲಾಖೆಯು ಬಿಬಿಎಂಪಿ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಯುನೈಟೆಡ್ ಬೆಂಗಳೂರು ಸಂಘಟನೆಗಳ ಜೊತೆ ಸರ್ವೆ ಕಾರ್ಯವನ್ನು ನಡೆಸುತ್ತಿದೆ.
ಕೆರೆ 47 ಎಕರೆ 17 ಗುಂಟೆ ವಿಸ್ತೀರ್ಣ ಹೊಂದಿದೆ. ಅದರಲ್ಲಿ2 ಎಕರೆ 39.5 ಗುಂಟೆ ಒತ್ತುವರಿ ಆಗಿದೆ ಎಂದು ಕೆ.ಬಿ.ಕೋಳಿವಾಡ ನೇತೃತ್ವದ ಸಮಿತಿ ವರದಿಯಲ್ಲಿ ತಿಳಿಸಲಾಗಿತ್ತು. ಯುನೈಟೆಡ್ ಬೆಂಗಳೂರು ಸಂಘಟನೆಯುಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ 2017ರ ಜೂನ್ 24 ರಂದು ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿತ್ತು.
ಕೆರೆ ಸರ್ವೆ ಮಾಡಿ ಒತ್ತುವರಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಸರ್ವೆ ನಡೆಸಲಾಗುತ್ತಿದೆ. ಸಂಪೂರ್ಣ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಲಾಗುತ್ತದೆ.
‘ನಗರದ ಹೃದಯ ಭಾಗದಿಂದ ದೂರ ಇರುವ ಈ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೊಳಚೆ ನೀರಿನಿಂದ ಭರ್ತಿಯಾಗಿರುವ ಕೆರೆಯಲ್ಲಿ ಕಳೆ ತುಂಬಿದೆ. ಕೆರೆ ಸುತ್ತ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಸರ್ವೆ ಮಾಡುವುದರಿಂದ ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿದುಬರಲಿದೆ. ಬಿಬಿಎಂಪಿಯವರು ಒತ್ತುವರಿಯನ್ನು ತೆರವುಗೊಳಿಸಿ, ಸುತ್ತಲೂ ತಂತಿ ಬೇಲಿ ನಿರ್ಮಿಸಬೇಕು’ ಎಂದು ಯುನೈಟೆಡ್ ಬೆಂಗಳೂರು ಸಂಘಟನೆ ಸಂಚಾಲಕ ಎನ್.ಆರ್.ಸುರೇಶ್ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.