ಬೆಂಗಳೂರು: ನಿವೇಶನದ ಖಾತೆ ಬದಲಾವಣೆ ಮಾಡಲು ₹ 13,000 ಲಂಚ ಪಡೆದ ಆರೋಪದ ಮೇಲೆ ಹೊಸಕೋಟೆ ತಾಲ್ಲೂಕಿನ ಬೋದನ ಹೊಸಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಬಿ. ರಾಮಮೂರ್ತಿ ಮತ್ತು ಡಿ. ದರ್ಜೆ ನೌಕರ ಶಿವಕುಮಾರ್ ಎಸ್. ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬಂಧಿಸಿದೆ.
ಮುತ್ಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಹೊಂದಿದ್ದ ನಗರದ ವಿದ್ಯಾರಣ್ಯಪುರ ನಿವಾಸಿಯೊಬ್ಬರು ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಪ್ರಕ್ರಿಯೆ ಪೂರ್ಣಗೊಳಿಸಲು ₹ 13,000 ಲಂಚ ನೀಡುವಂತೆ ರಾಮಮೂರ್ತಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕಕ್ಕೆ ದೂರು ನೀಡಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
‘ಶುಕ್ರವಾರ ಅರ್ಜಿದಾರರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿನೀಡಿ, ಕೆಲಸದ ಕುರಿತು ವಿಚಾರಿಸಿದರು. ರಾಮಮೂರ್ತಿ ಸೂಚನೆಯಂತೆ ಶಿವಕುಮಾರ್ ಲಂಚದ ಹಣವನ್ನು ಪಡೆದುಕೊಂಡರು. ತಕ್ಷಣ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಇಬ್ಬರನ್ನೂ ಬಂಧಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.