ಬೆಂಗಳೂರು: ಕಾಟನ್ಪೇಟೆಯ ಗೂಡ್ಶೆಡ್ ರಸ್ತೆಯಲ್ಲಿ, ರೈಲ್ವೆ ಪಾರ್ಸೆಲ್ ವಿಭಾಗದ ಕಚೇರಿ ಎದುರು ಶನಿವಾರ ರಾತ್ರಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಬಾಲಕ ಆರ್.ಧನುಷ್ ಉರ್ಫ್ ದಯಾನಂದ್ (17) ಮೃತಪಟ್ಟಿದ್ದಾನೆ.
‘ಕಾಟನ್ಪೇಟೆಯ ಭಕ್ಷಿ ಗಾರ್ಡನ್ ನಿವಾಸಿ ದಯಾನಂದ್, 9ನೇ ತರಗತಿಯಲ್ಲಿ ಓದುತ್ತಿದ್ದ. ಬೈಕ್ ಹಿಂಬದಿ ಸವಾರ, ಬಾಲಕ ಎಸ್.ಡಿ.ಹಿತೇಶ್ (16) ಗಾಯಗೊಂಡಿದ್ದಾನೆ’ ಎಂದು ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಧನುಷ್ನ ಅಜ್ಜ ಶನಿವಾರ ತೀರಿಕೊಂಡಿದ್ದರು. ಮನೆ ಎದುರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿತ್ತು. ಸಂಬಂಧಿಕರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಲ್ಲಿ ಸೇರಿದ್ದರು. ‘ಎಲ್ಲರಿಗೂ ಊಟ ತರಲು ಧನುಷ್ ಹಾಗೂ ಸ್ನೇಹಿತ ಹಿತೇಶ್, ಹೋಟೆಲ್ನತ್ತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಧನುಷ್ನ ಮಾವ, ಮತ್ತೊಂದು ದ್ವಿಚಕ್ರ ವಾಹನದಲ್ಲಿ ಅವರಿಬ್ಬರನ್ನು ಹಿಂಬಾಲಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿದ್ದ ದ್ವಿಚಕ್ರ ವಾಹನ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ವಾಹನ ಸಮೇತ ಉರುಳಿಬಿದ್ದ ಧನುಷ್ ತಲೆಗೆ, ಹಿತೇಶ್ನ ಎಡಗಾಲಿಗೆ ಪೆಟ್ಟಾಗಿತ್ತು. ಹಿಂದೆಯೇ ಬರುತ್ತಿದ್ದ ಆತನ ಮಾವ, ಇಬ್ಬರನ್ನೂ ಆಟೊದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗದಲ್ಲೇ ಧನುಷ್ ಮೃತಪಟ್ಟಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.
ಕುಟುಂಬಕ್ಕೆ ಆಘಾತ: ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ಕುಟುಂಬ, ಮೊಮ್ಮಗನ ಸಾವಿನ ಸುದ್ದಿ ಕೇಳಿ ಮತ್ತಷ್ಟು ಆಘಾತಕ್ಕೆ ಒಳಗಾಯಿತು. ಅಜ್ಜ– ಮೊಮ್ಮಗನ ಸಾವು ನೆನೆದು ಕುಟುಂಬದವರು ಹಾಗೂ ಸಂಬಂಧಿಕರು ಕಣ್ಣೀರಿಟ್ಟರು. ವಿಕ್ಟೋರಿಯಾ ಆಸ್ಪತ್ರೆ ಎದುರು ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.