ADVERTISEMENT

ಅಪಘಾತ ನಡೆದು 9 ವರ್ಷಗಳ ಬಳಿಕ ಸಿಕ್ಕಿಬಿದ್ದ ಅಪರಾಧಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 19:19 IST
Last Updated 28 ನವೆಂಬರ್ 2022, 19:19 IST
   

ಬೆಂಗಳೂರು: ಎನ್‌.ಆರ್. ರಸ್ತೆಯಲ್ಲಿ ಅಪಘಾತವನ್ನುಂಟುಮಾಡಿ ಹನುಮಂತಪ್ಪ (43) ಎಂಬುವರ ಸಾವಿಗೆ ಕಾರಣನಾಗಿ ತಲೆಮರೆಸಿಕೊಂಡಿದ್ದ ಅಪರಾಧಿ ರಘುನಾಥ್ ಪಾಸ್ವಾನ್ (32), ಒಂಬತ್ತು ವರ್ಷಗಳ ಬಳಿಕ ಹಲಸೂರು ಗೇಟ್ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಹೊಯ್ಸಳ ನಗರದ ನಿವಾಸಿ ರಘುನಾಥ್, 2009ರ ನ. 17ರಂದು ತನ್ನ ಕಾರನ್ನು ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಚಲಾಯಿಸಿದ್ದ. ಇದರಿಂದಾಗಿ ಕಾರು, ಪಾದಚಾರಿ ಹನಮಂತಪ್ಪ ಅವರಿಗೆ ಗುದ್ದಿತ್ತು. ತೀವ್ರ ಗಾಯಗೊಂಡು ಹನುಮಂತಪ್ಪ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ರಘುನಾಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಸಹ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ರಘುನಾಥ್, ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ. ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.’

ADVERTISEMENT

‘ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಬೇಕಿದ್ದ ರಘುನಾಥ್, ಏಕಾಏಕಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಹಲವು ವರ್ಷಗಳಿಂದ ತನಿಖೆ ಮುಂದುವರಿಸಲಾಗಿತ್ತು. ಇತ್ತೀಚೆಗೆ ಸಿಕ್ಕಿಬಿದ್ದ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಅಲ್ಲಿಂದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಿಟ್ಟು ಬರಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.