ADVERTISEMENT

ಅಪಘಾತದ ಕಾರಿನ ಸುಳಿವು ನೀಡಿದ ‘ಕನ್ನಡಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 19:45 IST
Last Updated 23 ಮಾರ್ಚ್ 2020, 19:45 IST

ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿರುವ ಲಿ–ಮೆರಿಡಿಯನ್ ಹೋಟೆಲ್ ಬಳಿ ಅಪಘಾತವನ್ನುಂಟು ಮಾಡಿ ಕೃಷ್ಣಮೂರ್ತಿ (39) ಎಂಬುವರ ಸಾವಿಗೆ ಕಾರಣವಾಗಿದ್ದ ಕಾರನ್ನು ಪೊಲೀಸರು ‘ಕನ್ನಡಿ’ ಸುಳಿವು ಆಧರಿಸಿ ಜಪ್ತಿ ಮಾಡಿದ್ದಾರೆ.

‘ಯಲಹಂಕದ ನಿವಾಸಿ ಕೃಷ್ಣಮೂರ್ತಿ (39), ಖಾಸಗಿ ಕಂಪನಿ ಉದ್ಯೋಗಿ. ಇದೇ 18ರಂದು ಮಡಿವಾಳದ ತಾವರಕೆರೆಗೆ ಹೋಗಿದ್ದ ಅವರು ಅಲ್ಲಿಂದ ರಾತ್ರಿ ವಾಪಸು ಮನೆಯತ್ತ ಹೊರಟಿದ್ದಾಗ ಅವಘಡ ಸಂಭವಿಸಿತ್ತು’ ಎಂದು ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಸಹೋದ್ಯೋಗಿಗಳ ಜೊತೆಯಲ್ಲಿಕೃಷ್ಣಮೂರ್ತಿ ಕಾರಿನಲ್ಲಿ ತೆರಳುತ್ತಿದ್ದರು. ರಾತ್ರಿ 11 ಗಂಟೆಗೆ ಲಿ–ಮೆರಿಡಿಯನ್ ಹೋಟೆಲ್ ಎದುರು ಕಾರಿನ ಚಕ್ರ ಪಂಕ್ಚರ್ಆಗಿತ್ತು. ಚಕ್ರ ಬಿಚ್ಚಿಕೊಂಡ ಕೃಷ್ಣಮೂರ್ತಿ ಸಮೀಪದಲ್ಲೇ ಅಂಗಡಿಯೊಂದಕ್ಕೆ ತೆರಳಿ ಪಂಕ್ಚರ್ ಹಾಕಿಸಿಕೊಂಡು ವಾಪಸು ಬರುತ್ತಿದ್ದರು. ರಸ್ತೆ ದಾಟುತ್ತಿದ್ದಾಗಲೇ ಬೆನ್ಜ್‌ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು.’

ADVERTISEMENT

‘ತೀವ್ರವಾಗಿ ಗಾಯಗೊಂಡ ಕೃಷ್ಣಮೂರ್ತಿ ಅವರನ್ನು ಸಹೋದ್ಯೋಗಿಗಳು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮಾ. 19ರಂದು ನಸುಕಿನಲ್ಲಿ ಅವರು ಮೃತಪಟ್ಟಿದ್ದರು. ಬೆನ್ಜ್ ಕಾರು ಯಾರದ್ದು ಎಂಬುದು ಗೊತ್ತಿರಲಿಲ್ಲ’ ಎಂದರು.

‘ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕಾರಿನ ‘ಕನ್ನಡಿ’ ಸಿಕ್ಕಿತ್ತು. ಅದರ ಮೇಲೆ ನಂಬರ್‌ಗಳನ್ನು ಗಮನಿಸಿದಾಗ, ಇದು ಬಿಳಿ ಬಣ್ಣದ ಬೆನ್ಜ್ ಕಾರು ಎಂಬುದನ್ನು ತಿಳಿಯಿತು. ನಗರದಲ್ಲಿರುವ ವಾಹನ ಮಾರಾಟ ಮಳಿಗೆ ಹಾಗೂ ಸಾರಿಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಕಾರನ್ನು (ಕೆಎ 04 ಎಂಡಬ್ಲ್ಯು 5040) ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.