ADVERTISEMENT

ಸರಣಿ ಅಪಘಾತ: ಆಟೊದಲ್ಲಿ ಸಿಲುಕಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 16:28 IST
Last Updated 13 ಜೂನ್ 2022, 16:28 IST
ಸ್ಯಾಟ್‌ಲೈಟ್ ಬಸ್ ನಿಲ್ದಾಣ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದ ಸರಣಿ ಅಪಘಾತದಲ್ಲಿ ಕ್ಯಾಂಟರ್ ಹಾಗೂ ಬಿಎಂಟಿಸಿ ನಡುವೆ ಸಿಲುಕಿ ನಜ್ಜುಗುಜ್ಜಾದ ಆಟೊ
ಸ್ಯಾಟ್‌ಲೈಟ್ ಬಸ್ ನಿಲ್ದಾಣ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದ ಸರಣಿ ಅಪಘಾತದಲ್ಲಿ ಕ್ಯಾಂಟರ್ ಹಾಗೂ ಬಿಎಂಟಿಸಿ ನಡುವೆ ಸಿಲುಕಿ ನಜ್ಜುಗುಜ್ಜಾದ ಆಟೊ   

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಬಳಿ ಸರಣಿ ಅಪಘಾತ ಸಂಭವಿಸಿದ್ದು, ನಜ್ಜುಗುಜ್ಜಾದ ಆಟೊದೊಳಗೆ ಸಿಲುಕಿ ತೀವ್ರ ಗಾಯಗೊಂಡು ಚಾಲಕ ಗಿರಿಸಾಗರ್ (43) ಮೃತಪಟ್ಟಿದ್ದಾರೆ.

ಶ್ರೀಗಂಧಕಾವಲು ನಿವಾಸಿ ಗಿರಿಸಾಗರ್ ಸೋಮವಾರ ಬೆಳಿಗ್ಗೆ 6.30 ಗಂಟೆ ಸುಮಾರಿಗೆ ಪ್ರಯಾಣಿಕರಿಗಾಗಿ ಹುಡುಕುತ್ತ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

‘ದಿನಸಿ ಸಾಮಗ್ರಿ ಸಾಗಿಸುತ್ತಿದ್ದ ಐಶರ್‌ಗೂಡ್ಸ್ ವಾಹನ ಹೊಸಗುಡ್ಡದಹಳ್ಳಿ ಜಂಕ್ಷನ್‌ನಿಂದ ಬಾಪೂಜಿನಗರಕ್ಕೆ ಹೊರಟಿತ್ತು. ಚಾಲಕ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ಎದುರಿಗಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿತ್ತು’ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಎದುರಿಗಿದ್ದ ಆಟೊಗೆ ಕ್ಯಾಂಟರ್ ಗುದ್ದಿತ್ತು. ಎದುರಿಗಿದ್ದ ಬಿಎಂಟಿಸಿ ಬಸ್‌ಗೆ ಅದೇ ಆಟೊ ಡಿಕ್ಕಿ ಹೊಡೆದಿತ್ತು. ಕ್ಯಾಂಟರ್ ಹಾಗೂ ಬಸ್ ನಡುವೆ ಆಟೊ ಸಿಲುಕಿಕೊಂಡು ನಜ್ಜುಗುಜ್ಜಾಗಿತ್ತು. ರಕ್ಷಣೆಗೆ ಬಂದ ಸ್ಥಳೀಯರು ಆಟೊದಲ್ಲಿ ಸಿಲುಕಿದ್ದ ಚಾಲಕ ಗಿರಿ ಸಾಗರ್‌ ಅವರನ್ನು ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದು ಪೊಲೀಸರು ವಿವರಿಸಿದರು.

‘ಐಶರ್ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತದ ಬಳಿಕ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಿತ್ತು. ವಾಹನಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.