ಬೆಂಗಳೂರು: ನಗರದ ಮೂರು ಕಡೆ ಭಾನುವಾರ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಕಾರ್ಮಿಕರು ಸೇರಿ ಮೂವರು ಮೃತಪಟ್ಟಿದ್ದಾರೆ.
‘ಡಿ.ಜೆ. ಹಳ್ಳಿಯ ಅಂಬೇಡ್ಕರ್ ನಗರ ನಿವಾಸಿ ಚಿರಂಜೀವಿ (34), ಮುನಿರಾಜು ಹಾಗೂ ಮಹದೇವಪುರ ನಿವಾಸಿ ಸೆಲ್ವಕುಮಾರ್ (37) ಮೃತರು. ರಾಜಾಜಿನಗರ ಹಾಗೂ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದರು.
‘ಕೂಲಿ ಕಾರ್ಮಿಕ ಚಿರಂಜೀವಿ, ಬಳ್ಳಾರಿ ರಸ್ತೆಯ ಕಾಫಿ ಡೇ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ.’
‘ಇನ್ನೊಂದು ಪ್ರಕರಣದಲ್ಲಿ ಕೋಗಿಲು ಹಾಗೂ ಬೆಳ್ಳಳ್ಳಿ ನಡುವಿನ ರಸ್ತೆಯಲ್ಲಿ ಬೈಕ್ ಗುದ್ದಿದ್ದರಿಂದಾಗಿ ಮುನಿರಾಜು (34) ಎಂಬುವರು ಸಾವಿಗೀಡಾಗಿದ್ದಾರೆ. ಇವರು ಸಹ ಕೂಲಿ ಕಾರ್ಮಿಕರು’ ಎಂದು ಪೊಲೀಸರು ತಿಳಿಸಿದರು.
ಕ್ರೇನ್ ಆಪರೇಟರ್ ಸಾವು; ನಂದಿನಿ ಲೇಔಟ್ ಬಳಿ ಹಾದು ಹೋಗಿರುವ ಹೊರವರ್ತುಲ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಗುದ್ದಿದ್ದು, ಅಪಘಾತದಿಂದ ತೀವ್ರ ಗಾಯಗೊಂಡು ಸವಾರ ಸೆಲ್ವಕುಮಾರ್ ಅಸುನೀಗಿದ್ದಾರೆ.
‘ಕ್ರೇನ್ ಆಪರೇಟರ್ ಆಗಿದ್ದ ಸೆಲ್ವಕುಮಾರ್, ತಮ್ಮ ಬೈಕ್ನಲ್ಲಿ ಸುಮ್ಮನಹಳ್ಳಿ ಕಡೆಯಿಂದ ಎಫ್ಟಿಐ ವೃತ್ತದ ಕಡೆಗೆ ಹೊರ ವರ್ತುಲ ರಸ್ತೆಯಲ್ಲಿ ಹೊರಟಿದ್ದರು. ಮಾರ್ಗಮಧ್ಯೆಯೇ ರಸ್ತೆಯಲ್ಲಿ ಯಾವುದೇ ಸೂಚನೆ ಪಾಲಿಸದೇ ಲಾರಿ ನಿಲುಗಡೆ ಮಾಡಲಾಗಿತ್ತು. ಅದೇ ಲಾರಿಗೆ ಸೆಲ್ವಕುಮಾರ್ ಬೈಕ್ ಗುದ್ದಿ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.