ADVERTISEMENT

ಈರುಳ್ಳಿ ವ್ಯಾಪಾರಿ ಸೇರಿ ಇಬ್ಬರ ಸಾವು

ಪ್ರತ್ಯೇಕ ಅಪಘಾತ; ಉರುಳಿಬಿದ್ದ ಆಟೊ, ವಿಭಜಕಕ್ಕೆ ಗುದ್ದಿದ ಬೈಕ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 21:03 IST
Last Updated 23 ಏಪ್ರಿಲ್ 2021, 21:03 IST

ಬೆಂಗಳೂರು: ನಗರದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಈರುಳ್ಳಿ ವ್ಯಾಪಾರಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ವ್ಯಾಪಾರಿ ತಬರೇಜ್ ಪಾಷಾ (21) ಹಾಗೂ ಮಂಜುಳಾ ಮೃತರು. ಪ್ರತ್ಯೇಕ ಅಪಘಾತಗಳ ಸಂಬಂಧ ವೈಟ್‌ಫೀಲ್ಡ್ ಹಾಗೂ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಿಜಿನಾಪುರದ ತಬರೇಜ್, ಆಟೊ ಮಾಲೀಕರಾಗಿದ್ದರು. ತಮ್ಮ ಆಟೊದಲ್ಲಿ ನಗರದಲ್ಲಿ ಸುತ್ತಾಡಿ ಈರುಳ್ಳಿ ಮಾರುತ್ತಿದ್ದರು. ಗುರುವಾರ ರಾತ್ರಿ ಆಟೊದಲ್ಲಿ ಚನ್ನಸಂದ್ರ ಕಡೆಯಿಂದ ಹೋಫ್ ಫಾರಂ ಕಡೆಗೆ ವೇಗವಾಗಿ ಹೊರಟಿದ್ದರು. ಅದೇ ಸಂದರ್ಭದಲ್ಲೇ ಎಂ.ವಿ.ಜೆ. ಕಾಲೇಜು ಎದುರು ಪುಟ್‌‍ಪಾತ್‌ಗೆ ಆಟೊ ಗುದ್ದಿ ಉರುಳಿ ಬಿದ್ದಿತ್ತು’ ಎಂದು ಪೊಲೀಸರು ಹೇಳಿದರು.

ADVERTISEMENT

‘ರಸ್ತೆ ಮೇಲೆ ಬಿದ್ದ ತಬರೇಜ್ ಮುಖ, ತಲೆ, ಎದೆ ಮತ್ತು ಸೊಂಟಕ್ಕೆ ತೀವ್ರ ಗಾಯವಾಗಿತ್ತು. ಸ್ಥಳೀಯರೇ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ತಬರೇಜ್ ಅಸುನೀಗಿದ್ದಾರೆ’ ಎಂದೂ ತಿಳಿಸಿದರು.

ವಿಭಜಕಕ್ಕೆ ಗುದ್ದಿದ ಬೈಕ್: ‘ಸಂಬಂಧಿಕರ ಮನೆಯಲ್ಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸು ಬೈಕ್‌ನಲ್ಲಿ ಹೋಗುವಾಗ ಅಪಘಾತವಾಗಿ ಮಂಜುಳಾ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕಣ್ಣೂರು – ಬಾಗಲೂರು ರಸ್ತೆಯಲ್ಲಿ ವಿಭಜಕಕ್ಕೆ ಬೈಕ್ ಗುದ್ದಿತ್ತು. ಹಿಂಬದಿಯಲ್ಲಿ ಕುಳಿತಿದ್ದ ಮಂಜುಳಾ ಅವರಿಗೆ ತೀವ್ರ ಗಾಯವಾಗಿ ಅಸುನೀಗಿದ್ದಾರೆ. ಸವಾರ ಪವನ್‌ಕುಮಾರ್ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.