ADVERTISEMENT

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ; ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 17:37 IST
Last Updated 11 ಡಿಸೆಂಬರ್ 2021, 17:37 IST

ಬೆಂಗಳೂರು: ವಿಜಯನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸವಾರರೊಬ್ಬರು ಅಪಘಾತವನ್ನುಂಟು ಮಾಡಿದ್ದು, ಇಬ್ಬರು ಗಾಯಗೊಂಡಿದ್ದಾರೆ.

‘ಕಾಮಾಕ್ಷಿಪಾಳ್ಯ ನಿವಾಸಿ ರಾಧಾಕೃಷ್ಣ ಹಾಗೂ ನ್ಯೂ ಬಿನ್ನಿಪೇಟೆ ನಿವಾಸಿ ಕೌಶಿಕ್ (18) ಗಾಯಗೊಂಡವರು. ನಗರದ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಅವರಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತವನ್ನುಂಟು ಮಾಡಿದ್ದ ಬೈಕ್ ಸವಾರ ಚೇತನ್ ಎಂಬಾತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪಿಎಸ್‌ಐ ನಿಂಗರಾಜು ಮತ್ತು ಹೆಡ್ ಕಾನ್‌ಸ್ಟೆಬಲ್ ಕೃಷ್ಣಮೂರ್ತಿ ಅವರು ಆರ್‌ಪಿಸಿ ಬಡಾವಣೆ ರಸ್ತೆಯಲ್ಲಿ ಡಿ. 9ರಂದು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ಮಾರ್ಗದಲ್ಲೇ ಚೇತನ್ ಬೈಕ್ ಚಲಾಯಿಸಿಕೊಂಡು ಬಂದಿದ್ದ. ಹಿಂಬದಿಯಲ್ಲಿ ಕೌಶಿಕ್ ಕುಳಿತಿದ್ದರು.’

ADVERTISEMENT

‘ಪೊಲೀಸರನ್ನು ನೋಡಿ ಹೆದರಿದ್ದ ಚೇತನ್, ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಅತಿವೇಗವಾಗಿ ಬೈಕ್ ಚಲಾಯಿಸಿದ್ದ. ರಸ್ತೆಯಲ್ಲಿ ನಿಂತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ರಾಧಾಕೃಷ್ಣ ಅವರಿಗೆ ಬೈಕ್ ಗುದ್ದಿಸಿದ್ದ. ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದಿತ್ತು. ಹಿಂಬದಿ ಸವಾರ ಕೌಶಿಕ್ ರಸ್ತೆಗೆ ಬಿದ್ದಿದ್ದರು. ಅಪಘಾತದ ನಂತರ ಚೇತನ್ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.