ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ, ಗಣಕೀಕರಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಒಟ್ಟು ಐದು ಪ್ರಶಸ್ತಿಗಳು ಒಲಿದಿವೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪೊಲೀಸ್ ಇಲಾಖೆ, ಬಂದೀಖಾನೆ ಇಲಾಖೆ, ನ್ಯಾಯ ವಿಜ್ಞಾನ ಪ್ರಯೋಗಾಲಯಗಳೊಂದಿಗೆ ಅಪರಾಧ ಮತ್ತು ಅಪರಾಧಿಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ವಿನಿಮಯ ಮಾಡಿಕೊಳ್ಳಲು ಹಾಗೂ ತ್ವರಿತವಾಗಿ ಪ್ರಕರಣಗಳ ವಿಲೇವಾರಿಗೆ ಸಹಕಾರಿಯಾಗುವ ವ್ಯವಸ್ಥೆಯನ್ನು ಸೃಜಿಸುವಲ್ಲಿ ರಾಜ್ಯ ಪೊಲೀಸ್ ಇಲಾಖೆ ನೀಡಿದ ಗಣನೀಯ ಸೇವೆಗೆ ರಾಷ್ಟ್ರಮಟ್ಟದಲ್ಲಿ ಮೂರನೇ ಬಹುಮಾನ ಬಂದಿದೆ.
ಸೈಬರ್ ಭದ್ರತೆ ಕುರಿತು ವಿಚಾರ ಮಂಡಿಸಿದ ಪೊಲೀಸ್ ಗಣಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಣವ ಮೊಹಂತಿ ಅವರಿಗೆ ಪ್ರಥಮ ಬಹುಮಾನ ಬಂದಿದೆ. ರಾಜ್ಯ ಅಪರಾಧ ದಾಖಲಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಚೇತನ್ಕುಮಾರ್, ಎಎಸ್ಐಗಳಾದ ದಿನೇಶ್ ಬಾಬು, ಮುನಿರಾಜ್ ಅವರಿಗೆ ಸಿಸಿಟಿಎಸ್/ಐಸಿಜಿಎಸ್ ಯೋಜನೆ ಜಾರಿಗೊಳಿಸುವಲ್ಲಿ ನೀಡಿದ ಸೇವೆಗೆ ಪ್ರತ್ಯೇಕ ಪ್ರಶಸ್ತಿಗಳು ಲಭಿಸಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.