ADVERTISEMENT

ಕಸ ಸಂಸ್ಕರಣೆಗೆ ಹೆಚ್ಚುವರಿ ಘಟಕ ನಿರ್ಮಾಣ

ನಗರದ ಕೆರೆಗಳು ಬಿಬಿಎಂಪಿ ವ್ಯಾಪ್ತಿಗೆ * ಕಸ ವಿಲೇವಾರಿಯಲ್ಲಿ ಭ್ರಷ್ಟಾಚಾರ: ಜಿಪಿಎಸ್ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 21:48 IST
Last Updated 6 ನವೆಂಬರ್ 2019, 21:48 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ    

ಬೆಂಗಳೂರು: ನಗರದಲ್ಲಿ ಪ್ರತಿದಿನ ಸುಮಾರು 4,500 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 2,500 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕಸ ಸಂಸ್ಕರಣೆ ಮಾಡಲುಹೆಚ್ಚುವರಿ ಘಟಕಗಳನ್ನು ಸ್ಥಾಪಿಸಲು ಬಿಬಿಎಂಪಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ನಗರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದು, ಮೂಲಸೌಕರ್ಯ ಸುಧಾರಣೆ, ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬುಧವಾರ ಮುಖ್ಯಮಂತ್ರಿ ನಿವಾಸ ‘ಕೃಷ್ಣಾ’ದಲ್ಲಿ ನಗರ ವ್ಯಾಪ್ತಿಯ ಶಾಸಕರು, ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಯಿತು. ಕಸ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.

ಸಭೆ ನಂತರ ಮಾಹಿತಿ ನೀಡಿದ ಯಡಿಯೂರಪ್ಪ, ‘ಕಸ ವಿಲೇವಾರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಘನತ್ಯಾಜ್ಯ ನಿರ್ವಹಣೆಗೆ ನೀಡುವ ಹಣದಲ್ಲಿ ಅರ್ಧದಷ್ಟು ದುರುಪಯೋಗ ಆಗುತ್ತಿದೆ. ಕಸ ಸಾಗಣೆಗೆ ಅಗತ್ಯ ಸಂಖ್ಯೆಯಲ್ಲಿ ವಾಹನಗಳನ್ನು ಬಳಸದಿದ್ದರೂ ಸುಳ್ಳು ಲೆಕ್ಕ ತೋರಿಸಿ ಹಣಲ ಪಟಾಯಿಸಲಾಗುತ್ತಿದೆ. ಈ ಅಕ್ರಮ ತಡೆಯುವ ಸಲುವಾಗಿ ಕಸ ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ ಮಾಡಲು ಸೂಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಕಸ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಬದಲು ಬೈಕ್‌ಗಳಿಗೆ ಅಳವಡಿಸಿಡು ಸಂಚರಿಸುವ ಮೂಲಕ ವಂಚಿಸುತ್ತಿದ್ದರು.
ಇದನ್ನು ತಪ್ಪಿಸುವ ಸಲುವಾಗಿ ಪ್ರತ್ಯೇಕ ನಿಯಂತ್ರಣ ಕೊಠಡಿ ತೆರೆದು ನಿಯಂತ್ರಿಸಲಾಗುವುದು. ಅಕ್ರಮದಲ್ಲಿ ತೊಡಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಪಾಲಿಕೆ ವ್ಯಾಪ್ತಿಗೆ ಕೆರೆ:ನಗರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಕೆರೆಗಳನ್ನು ಬಿಬಿಎಂಪಿಗೆ ವಹಿಸುವುದು. ಕೆರೆ ಪ್ರದೇಶದಲ್ಲಿ ಬಡವರು ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅವುಗಳನ್ನು ಬಿಟ್ಟು, ಶ್ರೀಮಂತರು, ಬಿಲ್ಡರ್‌ಗಳು ಒತ್ತುವರಿ ಮಾಡಿದ್ದರೆ ತೆರವುಗೊಳಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಗರದ ವ್ಯಾಪ್ತಿಯಲ್ಲಿ ಇರುವ ಕೆರೆಪ್ರದೇಶದಲ್ಲಿ 628 ಎಕರೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವುದು.

ರಾಜಕಾಲುವೆ ಒತ್ತುವರಿ ತೆರವಿಗೂ ಕ್ರಮಕೈಗೊಳ್ಳಲಾಗಿದೆ ಎಂದು ಸಿ.ಎಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.