ಬೆಂಗಳೂರು: ‘ನಮೀಬಿಯಾದ ಒಂದು ಜನಾಂಗ ಕೋತಿಗಳನ್ನು ಬೇಟೆಯಾಡಿ ಬದುಕುತ್ತದೆ. ತೆಂಗಿನಮರದಲ್ಲಿರುವ ತೆಂಗಿನ ಕಾಯಿಯನ್ನು ಬರಿದು ಮಾಡಿ ಕೆಂಪು ರಸವೊಂದನ್ನು ತುಂಬಿಸಿ, ಅದರ ಸಹಾಯದಿಂದ ಅವರು ಕೋತಿಗಳನ್ನು ಹಿಡಿಯುತ್ತಾರೆ ಗೊತ್ತೆ?
- ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಈ ಪ್ರಶ್ನೆ ಕೇಳಿ ಕುತೂಹಲ ಮೂಡಿಸಿದ್ದು ಸಿನರ್ಜಿಯಾ ಫೌಂಡೇಷನ್ನ ಸ್ಥಾಪಕ ಮತ್ತು ಅಧ್ಯಕ್ಷ ಟಾಮಿ ಸಿನನ್.
‘ತೆಂಗಿನ ಮರದಲ್ಲಿರುವ ಕೆಂಪು ರಸ ಕೋತಿಗಳಿಗೆ ಆಕರ್ಷಕ ಎನಿಸುತ್ತದೆ. ಕಾಯಿಯೊಳಗೆ ಕೈಹಾಕಿ, ಅದರಿಂದ ಕೈ ವಾಪಸ್ ತೆಗೆದುಕೊಳ್ಳಲು ಸಾಧ್ಯವಾಗದೆ ಬೊಬ್ಬಿಟ್ಟು ಚೀರಾಡುತ್ತವೆ. ಬಿಡಿಸಿಕೊಳ್ಳುವ ಎಲ್ಲ ಪ್ರಯತ್ನ ವಿಫಲವಾದ ನಂತರ ಕೋತಿಗಳು ಮಂಕಾಗುತ್ತವೆ. ಅಲ್ಲಿಯವರೆಗೆ ಸುಮ್ಮನಿದ್ದ ಬೇಟೆಗಾರರು ಆಗ ಮರ ಏರುತ್ತಾರೆ. ತಮ್ಮ ಕೆಲಸ ಮುಗಿಸಿಕೊಳ್ಳುತ್ತಾರೆ…’ ಎಂದು ಕಥೆ ಹೇಳಿದರು.
ನಮ್ಮ ಭದ್ರತೆ ಜಾಲವನ್ನು ಹೇಗೆಲ್ಲಾ ಭೇದಿಸಲಾಗುತ್ತದೆ ಎನ್ನುವುದನ್ನು ವಿವರಿಸಲು ಅವರು ಈ ಕಥಾರೂಪಕದ ಮೂಲಕ ಕಟ್ಟಿಕೊಟ್ಟರು.
‘ರಕ್ಷಣೆಗೆಂದು ಖರೀದಿಸಿದ ಉತ್ಪನ್ನಗಳನ್ನು ಹಲವು ವರ್ಷಗಳ ಅವಧಿಗೆ ಬಳಸುತ್ತೇವೆ. ದೀರ್ಘಾವಧಿಯಲ್ಲಿ ಮೂಲ ಉತ್ಪಾದಕರು ಬಿಡಿಭಾಗಗಳನ್ನು ಒದಗಿಸದೇ ಇದ್ದಾಗ ಪರ್ಯಾಯ ಪೂರೈಕೆದಾರರತ್ತ ಎದುರು ನೋಡುತ್ತೇವೆ. ಇಂಥ ಸಂದರ್ಭ, ಉತ್ಪನ್ನದ ವಿವರಗಳನ್ನು ಪೂರೈಕೆದಾರರೊಡನೆ ಹಂಚಿಕೊಳ್ಳಬೇಕಾಗಬಹುದು. ಇದರಿಂದ ಭದ್ರತೆಗೆ ಆತಂಕ ಒದಗಬಹುದು’ ಎಂದು ಅವರು ವಿಶ್ಲೇಷಿಸಿದರು.
‘ಬಿಡಿ ಉತ್ಪನ್ನಗಳ ಪೂರೈಕೆದಾರರ ಸಂಖ್ಯೆ ಹೆಚ್ಚಾದಂತೆ ಸೂಕ್ಷ್ಮ ಮಾಹಿತಿ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ದತ್ತಾಂಶವನ್ನು ಹಂಚಿಕೊಂಡ ನಂತರ ಅದರ ಮೇಲಿನ ನಿಯಂತ್ರಣ ಅಥವಾ ಅದು ಹೇಗೆ ಬಳಕೆಯಾಗಬಹುದು ಎಂಬುದನ್ನು ನಿಯಂತ್ರಿಸುವುದು ದೊಡ್ಡ ಸವಾಲು’ ಎಂದು ಅಭಿಪ್ರಾಯಪಟ್ಟರು.
ಏರ್ ಚೀಫ್ ಮಾರ್ಷಲ್ (ನಿವೃತ್ತ) ಫಾಲಿ ಹೊಮಿ ಮೇಜರ್, ಡಿಆರ್ಡಿಒ ನಿವೃತ್ತ ನಿರ್ದೇಶಕ ಕೆ.ಡಿ.ನಾಯಕ್ ತಮ್ಮ ವಿಚಾರಗಳನ್ನು ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.